06 ಮಾರ್ಚ್, 2014

ಪ್ರವರ ಕೊಟ್ಟೂರು ಬರೆದ ಕವನ


೧.
ಯಾವತ್ತೂ ಹೃದಯ ಬಟ್ಟಲು
ತುಂಬಬಾರದು,
ಏಕೆಂದರೆ
ಖಾಲಿಯಾಗುವುದು ತುಸು ಕಷ್ಟ

೨.
ಎದೆಯೊಳಗೆ 
ಒಂದೋ ಒಲವಿರಬೇಕು
ಇಲ್ಲಾ ವಿಷವಿರಬೇಕು
ಎರಡೂ ಒಟ್ಟಿಗೆ ಇದ್ದಲ್ಲಿ
ಸತ್ತಂತೆ ಬದುಕಬೇಕಾದೀತು

೩.
ಅಳಕ್ಕಿಳಿದ ನಂತರ
ಮೌನ ತಾನಾಗೆ ಆವರಿಸುತ್ತದೆ,
ಈ ನಿಯಮ
ಎಲ್ಲಕ್ಕೂ ಅನ್ವಯಿಸುತ್ತದೆ

೪.
ಕಾಮದಲ್ಲಿ ಸೋತವರು
ಮತ್ತು
ಪ್ರೇಮದಲ್ಲಿ ಗೆದ್ದವರು
ಮಹಾ ಮೂರ್ಖರು


ಶೂನ್ಯದಲ್ಲಿ ನಿಂತು
ಮೌನವನ್ನೂ ಕತ್ತಲನ್ನೂ
ತೂಗಿದೆ
ಎರಡೂ ಹಗುರ ಎನ್ನಿಸಿದವು

೬.
ಶವದ ಪೆಟ್ಟಿಗೆ ಒಯ್ಯುವ
ದಾರಿಯಲ್ಲಿ
ಹೂವುಗಳು ನಗುವ ಹಾಗಿಲ್ಲವೆಂದರೆ
ನಿಮಿಷದ ಮಟ್ಟಿಗಾದರೂ ಎದೆ ಬಡಿತ
ತಡೆಹಿಡಿಯಿರಿ
                        -ಪ್ರವರ ಕೊಟ್ಟೂರು

05 ಫೆಬ್ರವರಿ, 2014

ಮಾದರಿ ರಾಜಕಾರಣಿ ದಿ. ಎಂ.ಪಿ.ಪ್ರಕಾಶ್

ಕರ್ನಾಟಕ ಕಂಡ ಅಪರೂಪದ ರಾಜಕಾರಣಿ ಸಮಾಜವಾದಿ, ರಂಗಕರ್ಮಿ, ಚಿಂತಕ, ಅತ್ಯದ್ಭುತ ವಾಕ್ಪಟು ದಿ.ಎಂ.ಪಿ.ಪ್ರಕಾಶ್ ನಮ್ಮನ್ನಗಲಿ ಫೆ.8 ಕ್ಕೆ 03 ವರ್ಷ ಸಂದಿದೆ. ವಕೀಲರಾಗಿ, ನಾಟಕಕಾರರಾಗಿ,ಸಂಡೂರು  ಭೂ ಚಳುವಳಿಯ ಹೋರಾಟದ ಸಂಘಟಕರಾಗಿ, ಗೋಕಾಕ್ ಚಳುವಳಿಯ ಹರಿಕಾರರಾಗಿ , ಜಯಪ್ರಕಾಶ್ ನಾರಾಯಣ್, ಜಾರ್ಜ್ ಫರ್ನಾಂಡೀಸ್, ಮಧುದಂಡವತೆ, ಚಂದ್ರಶೇಖರ್, ವಿ.ಪಿ.ಸಿಂಗ್ ರಂತಹ ಘಟಾನುಘಟಿ ನಾಯಕರ ಒಲುಮೆ ಗಳಿಸಿದ್ದ ಎಂ.ಪಿ.ಪ್ರಕಾಶ್ ಅದ್ಭುತ ಬರಹಗಾರರೂ ಹೌದು. ಎಸ್.ನಿಜಲಿಂಗಪ್ಪನವರ ಕುರಿತಾದ ಅವರ ಪುಸ್ತಕ ಜೊತೆಗೆ ಪ್ರೀತಿಯೇ ದೇವರು ಕಥಾಸಂಕಲನ, ಹಂಪಿ ಕುರಿತಾದ ಲೇಖನಗಳು ಹೀಗೆ ಸೂರ್ಯ ಶಿಕಾರಿ ನಾಟಕ ಹೀಗೆ ಸಾಹಿತ್ಯ ಲೋಕದಲ್ಲೂ ಕೈಯಾಡಿಸಿ ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಎಲ್ಲಾ ಕ್ಷೇತ್ರಗಳ ಮಾಹಿತಿಯನ್ನು ತುದಿನಾಲಿಗೆಯಲ್ಲೇ ಹೇಳುತ್ತಿದ್ದ ಪ್ರಕಾಶರ ಜ್ಞಾಪಕ ಶಕ್ತಿ ನಿರಂತರ ಓದುವಿಕೆ  ಇಂದಿನ ರಾಜಕಾರಣಿಗಳಿಗೆ ಇಲ್ಲದಿರುವುದು ದುರಂತ.



ಸಾರಿಗೆ ಸಚಿವರಾಗಿದ್ದಾಗ ಹಳ್ಳಿಗಳ ಮಕ್ಕಳು ಪಟ್ಟಣಗಳಲ್ಲಿ ಓದಲೆಂದು ಬಸ್ ಪಾಸ್ ಯೋಜನೆ ಜಾರಿಗೆ ತಂದು ಸಾವಿರಾರು ಹಳ್ಳಿ ಮಕ್ಕಳು ಉನ್ನತ ಶಿಕ್ಷಣ ಪಡೆಯಲು ನೆರವಾಗಿದ್ದು ಮರೆಯುವಂತಿಲ್ಲ. ಕೃಷಿ ಕ್ಷೇತ್ರದಲ್ಲಿ ಹೊಸ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಧಾರವಾಡದಲ್ಲಿ ಕೃಷಿ ವಿಶ್ವವಿದ್ಯಾಲಯ ಸ್ಥಾಪಿಸಿ ರೈತರ ಬದುಕಿಗೆ ನೆರವಾದರು. ಕನ್ನಡ ಭಾಷೆ, ಅದರ ಉಪ ಭಾಷೆಗಳು, ಉಪ ಸಂಸ್ಕೃತಿ, ಜಾನಪದ, ದೇಶೀಯತೆಯನ್ನು ಮುಂದಿನ ಪೀಳಿಗಿಗೆ ಉಳಿಸಲು ಹಂಪಿಯಲ್ಲಿ ಕನ್ನಡ ವಿ.ವಿ. ಸ್ಥಾಪಿಸುವ ಕನಸು ಹೊತ್ತು ನನಸಾಗಿಸಿದರು. ವಿಜಯನಗರ ಸಾಮ್ರಾಜ್ಯದ ಗತವೈಭವವನ್ನು ಮರುಕಳಿಸುವಂತೆ ಮಾಡಲು ಹಂಪಿ ಉತ್ಸವದ ರೂವಾರಿಯಾಗಿ  ಜಾಗತಿಕ ಮಟ್ಟದಲ್ಲಿ ಹಂಪಿಯನ್ನು ಮೆರೆಸಿದರು. ಹಳ್ಳಿಗಳಲ್ಲಿ ಮಲವಿಸರ್ಜನೆಗೆ ರಸ್ತೆಯ ಪಕ್ಕದಲ್ಲಿ ಕೂರಲು ಬೆಳಕು ಹರಿಯುವುದರೊಳಗಾಗಿ ಅಥವಾ ಕತ್ತಲಾದ ಮೇಲೆ ಹೊರಗೆ  ಹೋಗುತ್ತಿದ್ದ ಮಹಿಳೆಯರ ಯಾತನೆ ಕಂಡು ನಿರ್ಮಲ ಕರ್ನಾಟಕ ಯೋಜನೆಯನ್ನು ಎಲ್ಲರ ಟೀಕೆಗಳ ನಡುವೆಯೂ ಜಾರಿಗೆ ತಂದು ಮಹಿಳೆಯರ ನೋವಿಗೆ ಸ್ಪಂದಿಸಿದರು. ಹೀಗೆ ಹತ್ತು ಹಲವು ನೆನಪು ಉಳಿಯುವ ಯೋಜನೆಗಳನ್ನು ಮುಂದಾಲೋಚನೆಯಿಂದ ಜಾರಿಗೆ ತರುತ್ತಿದ್ದ ಪ್ರಕಾಶರು ಉತ್ತಮ ಓದುಗರಾಗಿದ್ದರು. ಓದು ಮನುಷ್ಯನನ್ನು ಸುಸಂಸ್ಕತನನ್ನಾಗಿಸುವ ಜೊತೆಗೆ ಕ್ರಿಯಾಶೀಲನನ್ನಾಗಿ ಮಾಡಿ ನಾಡಿನ ಜನತೆಗೆ ಹೊಸತನ ನೀಡುವ ಪರಂಪರೆ ಸೃಷ್ಟಿಸುತ್ತದೆ. ಪ್ರಕಾಶ್ ಸೃಷ್ಟಿಯ ಹರಿಕಾರರು.
ಅಧಿಕಾರವಿರಲಿ ಬಿಡಲಿ ನಿರಂತರವಾಗಿ ರಂಗ ಚಟುವಟಿಕೆಗಳನ್ನು ತಾವೇ ಸ್ಥಾಪಿಸಿದ್ದ ರಂಗಭಾರತಿಯ ಮೂಲಕ ಜಾರಿಯಲ್ಲಿಟ್ಟಿದ್ದ ಪ್ರಕಾಶರು ಪ್ರತಿ ವರ್ಷವೂ 5 ರಿಂದ 7 ದಿನಗಳ ಕಾಲ ನಾಟಕೋತ್ಸವವನ್ನು ಹಡಗಲಿಯಲ್ಲಿ ಏರ್ಪಡಿಸಿ ಜನತೆಗೆ ರಂಗಭೂಮಿಯ ಮಹತ್ವ ಮತ್ತು ಸೆಳೆತ, ಅಭಿರುಚಿ ಮೂಡಿಸುತ್ತಿದ್ದರು.


ಹೀಗೆ ಹತ್ತು ಹಲವು ಪ್ರತಿಭಾನ್ವಿತ ಕಲೆಗಳನ್ನು ಹೊಂದಿದ್ದ ಪ್ರಕಾಶರ ಕುರಿತು ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿ ವಿ.ಎಸ್.ನೈಪಾಲ್ ಭಾರತಕ್ಕೆ ಭೇಟಿ ನೀಡಿ ಭಾರತದ ಎಲ್ಲಾ ರಾಜ್ಯಗಳ ಮಂತ್ರಿಗಳ ಹಾಗೂ ಕೇಂದ್ರ ಮಂತ್ರಿಗಳ ವಿವರ ಸಂಗ್ರಹಿಸಿ ಅದರಲ್ಲಿ ಎಂ.ಪಿ.ಪ್ರಕಾಶ್ ಭಾರತ ಕಂಡ ಎಲ್ಲಾ ಕ್ಷೇತ್ರಗಳಲ್ಲೂ ಪರಿಣಿತಿ ಹೊಂದಿದ ರಾಜಕಾರಣಿ ಎಂದು ತಮ್ಮ ದಶಲಕ್ಷ ದಂಗೆಗಳು ಕೃತಿಯಲ್ಲಿ ದಾಖಲಿಸಿ ಪ್ರಕಾಶರ ಲೀಲಾಜಾಲ ಪಾಂಡಿತ್ಯವನ್ನು ಪ್ರಶಂಸಿಸಿದ್ದಾರೆ. ವಿದೇಶಿ ನೊಬೆಲ್ ಪ್ರಶಸ್ತಿ ವಿಜೇತ ಸಾಹಿತಿಯ ಮಾತಿಗಿಂತ ಪ್ರಕಾಶರ ಬಗ್ಗೆ ಹೆಚ್ಚೇನು ಹೇಳಲಾಗದು.
ಪ್ರಕಾಶರಂತಹ ಮೇಧಾವಿ ರಾಜಕಾರಣಿಗಳ ಪಾಂಡಿತ್ಯ, ಓದುವ ಆಸಕ್ತಿ, ವಿಷಯದ ಬಗ್ಗೆ ಸದನದಲ್ಲಿ ಆಳವಾಗಿ ಚರ್ಚಿಸುವ ಶಕ್ತಿ, ಲಲಿತಕಲೆಗಳ ಬಗ್ಗೆ ಆಸಕ್ತಿ ಇಂದಿನ ರಾಜಕಾರಣಿಗಳಿಗೆ ಬಂದರೆ ಕರ್ನಾಟಕ ಕಲ್ಯಾಣ ಕನ್ನಡ ನಾಡು ಆಗುವಲ್ಲಿ ಯಾವ ಸಂಶಯವೂ ಇಲ್ಲ. ಪ್ರಕಾಶರು ನಮ್ಮೊಂದಿಗಿಲ್ಲದಿದ್ದರೂ ಅವರ ತತ್ವ, ಆದರ್ಶ, ಸಮಾಜವಾದ, ನಮ್ಮೆಲ್ಲರ ನಡುವೆ ಗೋಚರಿಸುತ್ತಿದೆ. ಎಂದಿಗೂ ಕುಟುಂಬ ರಾಜಕಾರಣ ಮಾಡದ ಪ್ರಕಾಶರು ತಾವು ಇರುವವರೆಗೂ ಮಗ ಎಂ.ಪಿ.ರವೀಂದ್ರರನ್ನು ಅಧಿಕಾರದ ಹತ್ತಿರ ಬಿಡಲಿಲ್ಲ. ಅವರ ಸಾವಿನ ನಂತರ ಅವರ ಪುತ್ರ ರವೀಂದ್ರ ಹರಪನಹಳ್ಳಿ ಶಾಸಕರಾಗಿದ್ದು ಗಮನಾರ್ಹ. ಎಲ್ಲಾ ರಾಜಕಾರಣಿಗಳು ತಾವೊಂದು ಕ್ಷೇತ್ರದಲ್ಲಿ ನಿಂತರೆ ಮತ್ತೊಂದು ಕ್ಷೇತ್ರದಲ್ಲಿ ತಮ್ಮನನ್ನೋ, ಮಗನನ್ನೋ, ಸೊಸೆಯನ್ನೋ, ತಂಗಿಯನ್ನೋ, ಅಳಿಯನನ್ನೋ ನಿಲ್ಲಿಸುವ ಪರಂಪರೆಯ ನಡುವೆ ಪ್ರಕಾಶರ ತಾತ್ವಿಕತೆ ನಮಗೆ ಆದರ್ಶ.
                                                                                                 - ಪತ್ರೇಶ್ ಹಿರೇಮಠ