27 ಆಗಸ್ಟ್, 2012

ಕರೆಂಟ್ ಬಿಲ್ ಏರುತ್ತಿದೆ...... ಪತ್ರೇಶ್ ಹಿರೇಮಠ್ ಬರೆದ ಕವನ


ಅವನು ಅವಳು
ಇಬ್ಬರಿಗೂ ನೌಕರಿ
ಸಂಜೆ ಕೆಲಸ ಮುಗಿಸಿ ಮನೆಗೆ
ಬೆಳಕಿಗಾಗಿ,  ಲೈಟು ಹಚ್ಚುತ್ತಾರೆ
ಮತ್ತು ಸೆಖೆ ತಾಳದೇ ಗಾಳಿಗಾಗಿ
ಫ್ಯಾನು ತಿರುಗಿಸುತ್ತಾರೆ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಸ್ವಲ್ಪ ಬೇಸರ ಹೋಗಲಾಡಿಸಲು
ಟಿವಿ ಆನ್ ಮಾಡುತ್ತಾರೆ
ಫ್ರಿಜ್ ಚಾಲೂ ಹಾಗೇ ಇರುತ್ತೆ...
ಬೆಳಗಿನ ಅಡುಗೆಯನ್ನು ಸ್ವಲ್ಪ ಬೇಯಿಸಲು
ಕರೆಂಟಿನ ಒಲೆ ಬಳಕೆಯಾಗುತ್ತದೆ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಊಟದ ನಂತರ
ಮಲಗಬೇಕು
ಸೊಳ್ಳೆಗಳ ಕಾಟ
ಸೊಳ್ಳೆ ಬತ್ತಿ ಹಚ್ಚಲೂ ಬೇಕು ಕರೆಂಟ್...
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಏಳುತ್ತಾರೆ ... ಬೆಳಿಗ್ಗೆ
ಸ್ನಾನ ಮಾಡಬೇಕಲ್ಲ ..
ಗೀಜರ್ ಹಾಜರ್
ಅಡುಗೆ ಬೇಕಾತಲ್ಲ
ಮಿಕ್ಸರ್ ಶುರೋಕರ್
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಟಿಫಿನ್ ಆಯಿತು
ಮಧ್ಯಾಹ್ನದ ಬಾಕ್ಸ್ ತಯಾರಿ
ಆಫೀಸಿಗೆ ಹೊರಡಬೇಕಲ್ಲ
ಹೊಸದಾಗಿ ಕಟ್ಟಿದ ಮನೆಗೆ
ತಂದಿಟ್ಟ ಬೆಲೆ ಬಾಳುವ ವಸ್ತುಗಳಿಗೆ ರಕ್ಷಣೆ..?
ಮನೆಗೊಂದು ವಿದ್ಯುತ್ ತಂತಿ ಬೇಲಿ
ಅದಕೂ ವಿದ್ಯುತ್ ಹರಿಯಲಿ
ಕರೆಂಟ್ ಬಿಲ್ ಏರುತ್ತಲೇ ಇದೆಯಲ್ಲ.... ?

ಮತ್ತೆ ಮೊದಲಿನಿಂದ ....  ಪ್ರಾರಂಭ
ಕರೆಂಟ್ ಬಿಲ್ ತುಂಬಲೇಬೇಕು
ಹೊರಗಾಳಿ, ರುಬ್ಬಿದ ಅಡುಗೆಯ ರುಚಿ
ಯಕ್ಷಗಾನ ನಾಟಕ ಗಾಯನ ಕಳೆದುಕೊಂಡಿದ್ದಕ್ಕೆ,
ಹಳೆಯ ಗಡಿಗೆ,ನೆಲುವಿಗಿ,ಬೀಸಣಿಕೆ
ಬೇವಿನ ಸೊಪ್ಪಿನ ಹೊಗೆ ಜೊತೆ ಜೊತೆ
ಬೆಳೆಸಿದ ಅಪ್ಪಅಮ್ಮನ ಮರೆತಿದ್ದಕ್ಕೆ
ಕರೆಂಟ್ ಬಿಲ್ ತುಂಬಲೇಬೇಕಿದೆ
ಕಳೆದುಕೊಂಡ ತಪ್ಪಿಗೆ ಬಿಲ್ ಏರುತ್ತಲೇ ಇದೆ....?

                                                                       ಪತ್ರೇಶ್ ಹಿರೇಮಠ್

10 ಜೂನ್, 2012

ಶ್ರೀರಾಮನಂತಾಗಬೇಕು..? ಪತ್ರೇಶ್ ಹಿರೇಮಠ ಬರೆದ ಕವನ

ನಾನು ಶ್ರೀರಾಮನಂತೆ
ಆದರ್ಶವಾದಿಯಾಗಬೇಕೆನ್ನುತ್ತೇನೆ...?

ಹೇಗೋ ಆದರ್ಶದ ಬೆನ್ನು ಹಿಡಿದು
ಬಸ್ಸು ಹತ್ತಿ
ಪ್ರೇಯಸಿಯ ಮಗ್ಗಲು ಕುಳಿತು
ಲಲ್ಲು ಹೊಡೆಯುವಾಗ
ನಿತ್ರಾಣ ಅಜ್ಜಿ  ಪಕ್ಕ ನಿಂತು ಸುಸ್ತಾಗುವುದು ಕಾಣುತ್ತದೆ..?
ಏಳುವಂತಿಲ್ಲ, ಕೂರುವಂತಿಲ್ಲ,
ರಾಮಾದರ್ಶ ಬಸ್ಸಿನ ಚಕ್ರದಲ್ಲಿ
ಸಿಲುಕಿ ಧೂಳಡರುತ್ತದೆ....?

ನಾನು ಶ್ರೀರಾಮನಂತೆ
ಏಕಪತ್ನೀವ್ರತಸ್ಥನಾಗಬೇಕೆನ್ನುತ್ತೇನೆ...?

ವ್ರತದ ಧ್ಯಾನಕ್ಕೆ ಭಂಗಕರಾಗಿ
ಪಕ್ಕ ಹಾಯುವ ಚೂಡಿ,ಮಿಡಿ,ಅತ್ತರು ನನ್ನ ತಾಕಿ
ನನ್ನೊಂದಿಗೆ ಸಂಘರ್ಷಕ್ಕಿಳಿದು
ಕಾಮ ಭುಗಿಲ್ಲೆನ್ನುತ್ತದೆ..
ಇಲ್ಲಿ ರಾಮ ಆಸ್ತಿತ್ವಹೀನನಾಗುತ್ತಾನೆ..?

ನಾನು ಶ್ರೀರಾಮನಂತೆ
ನಿಷ್ಠಾವಂತ, ಸತ್ಯದುರಂಧರನಾಗಬೇಕೆನ್ನುತ್ತೇನೆ...?

ಆದರೆ ನನ್ನವಳ ದುಬಾರಿ ಶಾಪಿಂಗ್ , ಬಂಗಾರ, ತೆಳು ನೈಟಿ,
ಫ್ರಿಡ್ಜು, ಮಿಕ್ಸಿ,ಸ್ಕೂಟಿ,ಕಾರುಗಳ ಆಶೆಯಲ್ಲಿ
ರಾಮನ ನಿಷ್ಠೆ ನೆಲದಲ್ಲಿ ಹೂತುಹೋಗಿ
ಕೈ ತಂತಾನೇ ಟೇಬಲ್ ಕೆಳಗೆ ಹೋಗುತ್ತದೆ...?

ಯಾಂತ್ರಿಕ ಜಗತ್ತು
ಐಷಾರಾಮಿ ಬದುಕು
ನೀರಸವಾದಾಗ
ನಾನು ಶ್ರೀರಾಮನಾಗುವ ಬಯಕೆ...?
ಈಡೇರತ್ತುದೇನೋ
ಎಂದು ಕಾದಿದ್ದೇನೆ...?

                                 ಪತ್ರೇಶ್ ಹಿರೇಮಠ್

27 ಮೇ, 2012

ಎಂ.ಪಿ.ಪ್ರಕಾಶ ಬಗ್ಗೆ ಹರಪನಹಳ್ಳಿ ಶಿವಕುಮಾರ ಬಾಗಳಿ ಬರೆದ ಕವನ

ಮರೆಯಾಯಿತು ಹೂವಿನ ಹಡಗು
ಶುರುವಾಯಿತು ಜನತೆಯ ಕೊರಗು
ಕಣ್ಮರೆಯಾಯಿತು ಪ್ರಕಾಶನ ಮೆರುಗು
ನಮ್ಮಿಂದ  ಅಗಲಿತು ಈ ಹೂವಿನ ಹಡಗು

ಬಡವರ ಜೀವನಕ್ಕೆ ಬೆಳಕು
ರಾಜಕೀಯ ಬದುಕಿಗೆ ಹೊಳಪು
ರಂಗ ಕಲಾವಿದರಿಗೆ ಹುರುಪು
ನಮ್ಮೊಂದಿಗೆ ಇರುವುದು ಮಾಸದ ಪ್ರಕಾಶನ ನೆನಪು

ಜನ ಬಲದಲಿ ತೇಲಿದ ಈ ಹಡಗು
ಹಣ ಬಲದಲಿ ಮುಳುಗಿದ  ಈ ಹಡಗು
ಬಿರುಗಾಳಿಗೆ ಬಗ್ಗದೆ ಸಾಗಿದ  ಈ ಹಡಗು
ಇನ್ಮುಂದೆ ನಾವೂ ನೋಡುವುದು ಬರೀ ಗೊಡಗು

ಭ್ರಷ್ಟಾಚಾರದ ಸುಳಿಗೆ ಸಿಲುಕದ ಹಡಗು
ಶಿಷ್ಟಾಚಾರಕ್ಕೆ ಒಳಗಾದ ಹಡಗು
ಒಳಸಂಚಿನ ತಂತ್ರಗಳ ತುಳಿತಕ್ಕೆ ಬಲಿಯಾದ ಹಡಗು
ಕೊನೆಯವರೆಗೂ ಅಜಾತ ಶತೃವಾಯಿತು ಈ ಹೂವಿನ ಹಡಗು...


ಶಿವಕುಮಾರ.ಹಾ.ಬಾಗಳಿ
ಆಂಗ್ಲ ಉಪನ್ಯಾಸಕರು ಎಸ್
.ಎಸ್.ಹೆಚ್.ಜೈನ್ ಪಿ.ಯು.ಕಾಲೇಜ್   ಹರಪನಹಳ್ಳಿ

08 ಫೆಬ್ರವರಿ, 2012

ರಾಜಕೀಯ ವಲಯದ ಸಾಂಸ್ಕೃತಿಕ ಜೀವಿ ಎಂ.ಪಿ.ಪ್ರಕಾಶ್ :ನೆನಪು

(ಇದೇ 8 ಫೆಭ್ರುವರಿ 2012ಕ್ಕೆ ಎಂ.ಪಿ.ಪ್ರಕಾಶ ನಮ್ಮೊಡನಿಲ್ಲದೇ ಒಂದು ವರ್ಷ.ತನ್ನಿಮಿತ್ತ ಈ ಲೇಖನ)

ಇಂದಿನ ರಾಜಕಾರಿಣಿಗಳ ಅರ್ಥಹೀನ ಮಾತು, ವೈಯುಕ್ತಿಕ ಹೀಯಾಳಿಕೆ , ವಿರೋಧಿಗಳ ಖಾಸಗಿತನವನ್ನು ಆಡಿಕೊಳ್ಳುವ ಹೀನತನವನ್ನು ಗಮನಿಸಿದಾಗ ಕರ್ನಾಟಕದ ರಾಜಕಾರಿಣಿಗಳು ಸದನದ ಗೌರವ ಎತ್ತಿ ಹಿಡಿಯುವ ಬದಲು ತೋಳೇರಿಸುವ ತೊಡೆ ತಟ್ಟುವ ಮಟ್ಟಕ್ಕೆ ತಲುಪಿ ವಿಧಾನ ಸಭೆಯ ಗೌರವ ಹಾಳುಗೆಡವಿದ್ದಾರೆ. ಇಂತಹ ಕೆಟ್ಟ ಪರಂಪರೆ ರಾಜಕಾರಿಣಿಗಳು ನಮ್ಮೆದುರಿಗಿರುವಾಗಲೇ ಹಳೆಯ ಸಂಸದೀಯ ಪಟುಗಳು ನಮ್ಮ ನೆನಪಿಗೆ ಬರುತ್ತಾರೆ.ಅದರಲ್ಲಿ ಎಲ್ಲಾ ರಂಗಗಳಲ್ಲಿ ತಮ್ಮ ವೈಯುಕ್ತಿಕ ಛಾಪು ಮೂಡಿಸಿದ್ದ ಎಂ.ಪಿ.ಪ್ರಕಾಶ್ .
ಜ್ನಾನಪೀಠ ಪ್ರಶಸ್ತಿ ಪುರಸ್ಕೃತ ಡಾ.ಯು.ಆರ್.ಅನಂತಮೂರ್ತಿಯವರು ಪ್ರಕಾಶ್ ನಿಧನದ ಸಂದರ್ಭದಲ್ಲಿ ಪ್ರಜಾವಾಣಿಯಲ್ಲಿ ಲೇಖನ ಬರೆದು " ಒಳದನಿಗೆ ಕಿವುಡಾಗದ ನಾಯಕ ಎಂ.ಪಿ.ಪ್ರಕಾಶ್" ಎಂಬ ಶೀರ್ಷಿಕೆ ನೀಡಿದಾಗಲೇ ಪ್ರಕಾಶ್ ರ ಶಕ್ತಿಯ ಅರಿವು ನನಗಾದದ್ದು. 

ಎಂ.ಪಿ.ಪ್ರಕಾಶ್ ರ ಬಗ್ಗೆ ನೊಬೆಲ್ ಪ್ರಶಸ್ತಿ ಪುರಸ್ಕೃತ ವಿ.ಎಸ್. ನೈಪಾಲ್ ತಮ್ಮ "ಎ ಮಿಲಿಯನ್ ಮ್ಯುಟಿನೀಸ್ ನೌ " ಪುಸ್ತಕದಲ್ಲಿ ಎಂ.ಪಿ.ಪ್ರಕಾಶರ ಕುರಿತಾಗಿ ಮೂವತ್ತು ಪುಟಗಳಷ್ಟು ಬರೆದು "ಭಾರತ ಕಂಡ ಬಹು ಪ್ರತಿಭಾವಂತ ರಾಜಕಾರಿಣಿ ,ಎಲ್ಲಾ ಕ್ಷೇತ್ರಗಳ ಸಮಗ್ರ ಮಾಹಿತಿ ಹೊಂದಿದ ಕಣಜ" ಎಂದು ಅಭಿಪ್ರಾಯ ದಾಖಲಿಸಿದ್ದಾರೆ.
ಅವರು ಇಂದು ನಮ್ಮೊಂದಿಗಿಲ್ಲ.ಆದರೆ ಅವರ ನೆನಪು,ವಿಚಾರಧಾರೆ,ಲೀಲಾಜಾಲ ಮಾತುಗಾರಿಕೆ ಮೂಲಕ ನಾಡಿನ ಗಮನ ಸೆಳೆದಿದ್ದ ಪ್ರತಿಭಾವಂತ ಎಂ.ಪಿ.ಪ್ರಕಾಶ್ ಕರ್ನಾಟಕ ನೆನಪಿಡುವಂತಹ ರಾಜಕಾರಿಣಿ. ಮರೆಯಲಾಗದ ವಿಜಯನಗರ ಸಾಮ್ರಾಜ್ಯ ಹೇಗೋ ಹಾಗೇ ಮರೆಯಲಾಗದ ಪ್ರಖರ ಸಾಂಸ್ಕೃತಿಕ ರಾಜಕಾರಣಿ ಎಂದರೂ ಅತಿಶಯೋಕ್ತಿಯೇನಲ್ಲ.
ಹಂಪಿ (ಪ್ರಕಾಶ್) ಉತ್ಸವ ಎಂದೇ ಕರೆಸಿಕೊಳ್ಳುವ  ಹಂಪಿ ಉತ್ಸವದ ರೂವಾರಿ, ಕನ್ನಡ ವಿಶ್ವವಿದ್ಯಾಲಯದ ಕನಸುಗಾರ, ಧಾರವಾಡ ಕೃಷಿ ವಿಶ್ವವಿದ್ಯಾಲಯ ಸ್ಥಾಪನೆ ಸಾಕಾರಗೊಳಿಸಿದ ಜನಪರ ಚಿಂತಕ, ಜಿಲ್ಲಾ ಉತ್ಸವಗಳ ಕನಸುಗಳ ಸಾಕಾರಿ ಎಂ.ಪಿ.ಪ್ರಕಾಶ್ ಕೇವಲ ರಾಜಕಾರಣಿಯಾಗಿರದೇ ಸೂಕ್ಷ ಮನಸ್ಸಿನ ನಾಯಕರಾಗಿದ್ದರು. ಹೆಗಡೆ ಸಂಪುಟದಲ್ಲಿ ಸಾರಿಗೆ ಸಚಿವರಾಗಿದ್ದಾಗ ಬಸ್ ಪಾಸ್ ನೀಡುವ ಯೋಜನೆ ಹಮ್ಮಿಕೊಳ್ಳುವ ಮೂಲಕ ಲಕ್ಷಾಂತರ ವಿದ್ಯಾರ್ಥಿಗಳ ಶಿಕ್ಷಣಕ್ಕೆ ನೆರವಾದರು. ಹಾಳು ಪಾಳು ಬಿದ್ದಿದ್ದ ,ಹೂವಿನ ಹಡಗಲಿ ಎಂದರೆ ಎಲ್ಲಿದೆ ಎನ್ನುತ್ತಿದ್ದ ಹಡಗಲಿಯನ್ನು ರಾಷ್ಟ್ರದ ಭೂಪಟದಲ್ಲಿ ಗುರುತಿಸುವಂತೆ ಅಭಿವೃಧ್ಧಿ ಪಡಿಸಿದರು.ಅಷ್ಟೆಲ್ಲಾ ಅಭಿವೃಧ್ದಿ ಮಾಡಿದರೂ ಜನತೆ ಜಾತಿ, ಧರ್ಮ ,ಒಳ ಪಂಗಡಗಳ ಹೆಸರಿನಲ್ಲಿ ಅವರನ್ನು ಸೋಲಿಸುತ್ತಿದ್ದರು.

ಓದು ಅವರ ಪ್ರಮುಖ ಹವ್ಯಾಸ .ನಿರಂತರ ಅಧ್ಯಯನದ ಮೂಲಕ ಲೀಲಾಜಾಲವಾಗಿ ತಾಸುಗಟ್ಟಲೇ ಕೇಳುಗರು ತಲ್ಲೀನರಾಗಿರುವಂತೆ ಮಾತನಾಡುತ್ತಿದ್ದ ಪ್ರಕಾಶ್ ವೇದಿಕೆಗಳಲ್ಲಿ ರಾಜಕಾರಣಕ್ಕಿಂತ ಸಾಹಿತ್ಯ,ಸಂಸ್ಕೃತಿ, ಕಲೆ,ರಂಗಭೂಮಿ,ಅರ್ಥಶಾಸ್ತ್ರ,ಇತಿಹಾಸ, ದೇಶ ವಿದೇಶಗಳ ಕುರಿತಾಗಿ ಕುಳಿತವರಿಗೆ ಸಮಯ ಹೋಗಿದ್ದು ತಿಳಿಯದಂತೆ ಮಾತನಾಡುತ್ತಿದ್ದರು. ಎಂ.ಪಿ.ಪ್ರಕಾಶ್ ರ ಭಾಷಣವೆಂದರೆ ಇವತ್ತು ಏನಾದರೂ ಹೊಸದನ್ನು ಪ್ರಕಾಶ್ ಹೇಳಬಹುದೇನೋ ಎಂದು ಜನ ಕೇಳಲು ಬರುತ್ತಿದ್ದರು.ಪ್ರಕಾಶ್ ರನ್ನು ರಾಜಕಾರಣಿಯಾಗಿ ನೋಡುವುದಕ್ಕಿಂತ  ಒಬ್ಬ ಬರಹಗಾರನಾಗಿ,ಲೇಖಕನಾಗಿ,ಅಂಕಣಕಾರನಾಗಿ,ರಂಗಕರ್ಮಿಯಾಗಿ, ನಟನಾಗಿ,ಸೂಜಿಗಲ್ಲಿನಂತೆ ಸೆಳೆಯುವ ಲೀಲಾಜಾಲ ಮಾತುಗಾರನಾಗಿ,ಇತಿಹಾಸದ ವಿಚಾರಗಳನ್ನು ಅಂಕಿ ಅಂಶ ಸಮೇತ ಹೇಳುವ ವಿದ್ವಾಂಸರಾಗಿ ಪ್ರಕಾಶ್ ಇಂದಿಗೂ ನಮ್ಮ ನೆನಪಿನಲ್ಲಿ ಅಚ್ಚಳಿಯದೇ ಉಳಿಯುತ್ತಾರೆ.
ನಾಡು ಕಟ್ಟುವ ಕನಸು ಹೊಂದಿದ ಪ್ರಕಾಶ್ ರಿಗೆ ರಾಜಕಾರಣದ ಪ್ರಮುಖ ಹುದ್ದೆ ಎಂದು ದೊರೆಯಲಿಲ್ಲ. ಮುಖ್ಯಮಂತ್ರಿ ಹುದ್ದೆಗೆ ಲಾಯಕ್ಕಾಗಿದ್ದ ಪ್ರಕಾಶ್ ಗೆ ಅದು ಮರೀಚಿಕೆಯಾಗಿ ಉಳಿಯಿತು.ಬಯಸದೇ ಬಂದ ಭಾಗ್ಯವಾದ ಉಪ ಮುಖ್ಯಮಂತ್ರಿ ಹುದ್ದೆ ಬಹಳ ದಿನವೂ ಇರಲಿಲ್ಲ. ರಾಜಕಾರಣದಲ್ಲಿ ಅಧಿಕಾರದಲ್ಲಿ ಇದ್ದಷ್ಟು ದಿನ ಪ್ರಕಾಶ್ ರ ಬಂಗಲೆಯ ಮುಂದೆ ಸಾಹಿತಿಗಳು, ಕಲಾವಿದರು, ಚಿತ್ರರಂಗದವರು, ಕಿರುತೆರೆ ಕಲಾವಿದರೇ ತುಂಬಿರುತ್ತಿದ್ದರು. ಪ್ರಕಾಶ್ ರ ಅಗಲಿಕೆ ಇಂದಿಗೂ ಸಾರಸ್ವತ ಲೋಕದ ಜನರಿಗೆ ನೋವಿನ ವಿಷಯವೇ.ತಮ್ಮ ಮತ ಕ್ಷೇತ್ರ ಹೂವಿನಹಡಗಲಿಯಲ್ಲಿ ರಂಗಭಾರತಿ ಎನ್ನುವ ನಾಟಕ ತಂಡ ಕಟ್ಟಿ ಐವತ್ತಕ್ಕೂ ಹೆಚ್ಚು ನಾಟಕಗಳನ್ನು ನಿರ್ದೇಶಿಸುವುದರ ಜೊತೆಗೆ ನಟಿಸಿ ದೇಶದಾದ್ಯಂತ ಪ್ರದರ್ಶನ ನೀಡಿದ್ದರು.ಈ ಸಾಧನೆಗಾಗಿಯೇ ನಾಟಕ ಅಕಾಡೆಮಿ ಫೆಲೋಶಿಪ್ ಪಡೆದಿದ್ದರು. 

 ಬಳ್ಳಾರಿ ಜಿಲ್ಲೆಗೆ ಹಂಪಿ ಉತ್ಸವದ ಮೂಲಕ ಅಂತರಾಷ್ಟ್ರೀಯ ಮಟ್ಟದಲ್ಲಿ ಸಾಂಸ್ಕೃತಿಕ ಹಿರಿಮೆ ಕಲ್ಪಿಸಿಕೊಟ್ಟ ಕೀರ್ತಿ ಪ್ರಕಾಶ್ ರಿಗೆ ಸಲ್ಲಬೇಕು. ಹಂಪಿ ಉತ್ಸವ ನಡೆಯುವ ಮೂರು ದನಗಳ ಕಾಲ ಎಲ್ಲಾ  ವೇದಿಕೆಗಳಲ್ಲಿ ತಿರುಗಾಡುತ್ತಾ ಕಲಾವಿದರೊಂದಿಗೆ ಬೆರೆಯುತ್ತಾ ಜನೋತ್ಸವದಲ್ಲಿ ತಾವು ಕಲಾವಿದರಾಗಿಬಿಡುತ್ತಿದ್ದರು. ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಇತಿಹಾಸ ತಜ್ಞರೊಂದಿಗೆ ಸೇರಿ ಹಂಪಿಯ ಗತ ವೈಭವದಲ್ಲಿ ಮುಳುಗೇಳುತ್ತಿದ್ದರು.ರಾಜಕಾರಣದ ಸೋಲು ಗೆಲುವುಗಳನ್ನು ಸಮನಾಗಿ ಸ್ವೀಕರಿಸುವ ಸ್ಥಿತಪ್ರಜ್ಞ ರಾಜಕಾರಿಣಿಯಾಗಿದ್ದ ಪ್ರಕಾಶ್ ಬದುಕಿದ್ದಷ್ಟೂ ದಿನವೂ ತಾವು ನಂಬಿದ ಮೌಲ್ಯಗಳು ಮುಕ್ಕಾಗದಂತೆ ನೋಡಿಕೊಂಡರು.ತಮ್ಮಾ ಕಟ್ಟಾ ವಿರೋಧಿಯನ್ನು ಅತ್ಯಂತ ಗೌರವಪೂರ್ವಕವಾಗಿ ಮಾತನಾಡುವಷ್ಟು ಸಹನಾಶೀಲರಾಗಿದ್ದರು.
ರಾಜಕಾರಣವೆಂದರೆ ಖಾದಿ ಧರಿಸುವುದಲ್ಲ, ರಾಜಕಾರಣವೆಂದರೆ ಗುತ್ತಿಗೆದಾರನಾಗಿ ಕಾಮಗಾರಿ ಮಾಡುವುದಲ್ಲ, ಬೈಕ್ ಹತ್ತಿ ಸುಮ್ಮನೆ ಕಛೇರಿಗಳಿಗೆ ಲಂಚ ತಿಂದು ಕೆಲಸ ಮಾಡಿಸುವುದಲ್ಲ.ರಾಜಕಾರಣವೆಂದರೆ ತತ್ವ, ಸಿದ್ದಾಂತ,ಬದ್ಧತೆ ಎನ್ನುತ್ತಿದ್ದ ಪ್ರಕಾಶರ ಮಾತುಗಳು ಇಂದಿನ ರಾಜಕಾರಿಣಿಗಳನ್ನು ನೋಡಿದಾಗ ಮತ್ತೆ ಮತ್ತೆ ನೆನಪಾಗುತ್ತವೆ. ಅವರ ಆದರ್ಶ , ಜ್ಷಾನ, ಪಾಂಡಿತ್ಯ, ಸಂಸದೀಯ ಪಟುವಾಗಿ ಮಾತನಾಡುವ ಶೈಲಿಯನ್ನು ಮತ್ತೆ ಮತ್ತೆ ನೆನಪಿಸುವ ಪ್ರಕಾಶ್ ದೈಹಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ....?ಅವರ ನೆನಪು ನಮ್ಮನ್ನು ಕಾಡುತ್ತಲೇ ಇದೆ.
                                                                         
                                                               ಪತ್ರೇಶ್ ಹಿರೇಮಠ್

25 ಜನವರಿ, 2012

ಕರಿಬಸವೇಶ್ವರಿ ಎಂ. ಬರೆದ ಕವನ - ಹೀಂಗಾ ಬಾ ನೆನಪೇ


ಹೀಂಗಾ ಬಾ . . . . . ನೆನಪೇ . . . . .
ಗೆಜ್ಜೀಯ ಕಟಗೊಂಡು
ಭರ ಭರನೆ  ಹೆಜ್ಜೀಯ ಹಾಕ್ಕೊಂಡು
ಬಂತೊಂದು ನನ್ನೆದೆಯಾ ನೆನಪು . . . . .

ಬಂದಂತ ನೆನಪು
ಬರಿ ನೆನಪಲ್ಲ ಅದು
ನನ್ನೆದೆಯಾ ರಸಗಳಿಗೆಯಾ ಜುಲುಪು . . . .

ನೆನಪ ಜುಲುಪನು ಬಿಚ್ಚಿ
ಬೇಸರದ ನೋವಿಗೆ ಮುಲಾಮು ಹಚ್ಚಿ
ಎದೆಯ ಗೂಡಿನ ಕಾಲನು ಬಿಚ್ಚಿ . . . .
ಕುಣಿದೆ . . .
ತಕಥೈ . . . .  ತಕಥೈ . . . . . ತಕಥೈ . . . .
ನಲಿದೆ . . .
ತಕಥೈ . . . .  ತಕಥೈ . . . . ತಕಥೈ . . .


 ಎದೆಯ ಕುಣಿಸಿದ ನೆನಪೇ
ನೋವೆನಿಸಿದರೂ ಮುದ ನೀಡಿದ
ಮಧುರ ಯಾತನೆಯ ನೆನಪೇ . . . .

ಮತ್ತೆ ಮತ್ತೆ  ಸುತ್ತಿ ಸುಳಿದು
ಹಿಂದ . . . . ಮುಂದ . . . ನೋಡದೇ ದಣಿದು
ಹೀಂಗಾ ಬಾ ನೆನಪೇ . . .
ಇದು ನಿನ್ನ ಮನಿ ಎಂದು ತಿಳಿದು
ಹೀಂಗಾ ಬಾ ನೆನಪೇ..
ಇದಾ ನಿನ್ನ ಮನಿ ಎಂದು ತಿಳಿದು . . .


ಕರಿಬಸವೇಶ್ವರಿ ಎಂ.
ನಿಂಬಳಗೇರಿ. ಕೂಡ್ಲಿಗಿ ತಾ!!

24 ಜನವರಿ, 2012

ಮಠಾಧೀಶರಿಗೇಕೆ ರಾಜಕಾರಣ.....?

 ಕರ್ನಾಟಕ ರಾಜಕಾರಣದಲ್ಲೀಗ ಖಾದಿಗಳಿಗಿಂತ ಕಾವಿಯದೇ ದರ್ಬಾರ್. ಮುಖ್ಯಮಂತ್ರಿ ಯಾರಾಗಬೇಕು? ಮಂತ್ರಿಗಳು ಯಾರಾಗಬೇಕು?ಯಾರನ್ನು ಇಳಿಸಬೇಕು.. ಯಾರನ್ನು ಗದ್ದಿಗೆಗೆ ಕೂರಿಸಬೇಕು ಎನ್ನುವದನ್ನು ನಿರ್ಧರಿಸುವವರು ಮಠಾಧೀಶರು ಎಂದರೆ ಅತಿಶಯೋಕ್ತಿಯೇನಲ್ಲ. ಈ ಹಿಂದೆ ಪೇಜಾವರ ಶ್ರೀಗಳನ್ನು ಹೊರತು ಪಡಿಸಿದರೆ ಯಾರೂ ರಾಜಕಾರಣದ ಬಗ್ಗೆ ಮಾತನಾಡುತ್ತಲೇ ಇರಲಿಲ್ಲ.ಅದರಲ್ಲೂ ವೀರಶೈವ ಮಠಾಧೀಶರಂತೂ ರಾಜಕಾರಣದ ಸನಿಹವೂ ಹೋಗುತ್ತಿರಲಿಲ್ಲ.ಆದರೆ ಇತ್ತೀಚೆಗೆ ಕರ್ನಾಟಕ ರಾಜಕಾರಣದಲ್ಲಿ ವೀರಶೈವ ಮಠಾಧೀಶರ ಹಸ್ತಕ್ಷೇಪ ಢಾಳಾಗಿ ಕಾಣುತ್ತಿದೆ.ಜನತೆ ಮಠಗಳ ಬಗ್ಗೆ ತಾತ್ಸಾರ ಮೂಡುವಂತೆ ಮಠಾಧೀಶರು ರಾಜಕಾರಿಣಿಗಳ ಪರ ಮಾತನಾಡುತ್ತಿದ್ದಾರೆ .

ಇದಕ್ಕೆ ಮೂಲ ಕಾರಣ ಯಡಿಯೂರಪ್ಪ.ವಿರೋಧ ಪಕ್ಷದ ನಾಯಕನಾಗಿದ್ದಷ್ಟು ದಿನಗಳ ಕಾಲ ಯಡಿಯೂರಪ್ಪನವರು ಮಾಡಿದ ಕೆಲಸವೆಂದರೆ ಪಕ್ಷ ಸಂಘಟನೆಗೆ ಯಾವುದೇ ಊರಿಗೆ ಹೋಗಲಿ ಆಲ್ಲಿರುವ ಮಠ, ಮಂದಿರ, ಸ್ವಾಮೀಜಿಗಳ ದರ್ಶನಾಶಿರ್ವಾದ ಪಡೆದು ಪುನೀತರಾದದ್ದು.ನಾಡಿನಾದ್ಯಂತ ಇರುವ ಎಲ್ಲಾ ಮಠಾಧೀಶರ ಸಂಪರ್ಕ ಗಳಿಸಿದ್ದು ಯಡಿಯೂರಪ್ಪ ಮುಖ್ಯಮಂತ್ರಿಯಾಗುವ ಹೊತ್ತಿಗೆ ವೀರಶೈವ ಮಠಾಧೀಶರ ಬೆಂಬಲ ಸಿಕ್ಕಿದ್ದು ಇವೆಲ್ಲವೂಗಳೂ ಕಾಕತಾಳೀಯ ಘಟನೆಯಾದರೂ ಇದರ ಸಮರ್ಥ ಲಾಭ ಪಡೆದ ಕರ್ನಾಟಕದ ಏಕೈಕ ವೀರಶೈವ ನಾಯಕನೆಂದರೆ ಯಡಿಯೂರಪ್ಪ.


ವೀರೇಂದ್ರ ಪಾಟೀಲ, ಬೊಮ್ಮಾಯಿ, ಜೆ.ಹೆಚ.ಪಟೇಲ , ಎಂ.ಪಿ.ಪ್ರಕಾಶ ರಂತಹ ವೀರಶೈವ ನಾಯಕರಿದ್ದರೂ ಇಡೀ ವೀರಶೈವ ಸಮುದಾಯದ ಅಭಿವೃಧ್ಧಿಗೆ ಅವರು ಚಿಂತನೆ ನಡೆಸಲಿಲ್ಲ.ವಿವಿಧ ಚಿಂತನೆ,ಸಮಾಜವಾದದ ಹಿನ್ನೆಲೆಯಿಂದ ಬಂದ ಈ ನಾಯಕರು ಎಲ್ಲಾ ಸಮುದಾಯದ ನಾಯಕರಾಗಲು ಹೋಗಿ ವೀರಶೈವರ ನಾಯಕರೂ ಆಗಲಿಲ್ಲ ಕೊನೆಗೆ ಇನ್ನುಳಿದ ಸಮುದಾಯಗಳು ಇವರನ್ನು ನಂಬದೇ ಇವರ ಸಮಾಜವಾದ ಇವರಿಗೆ ಮುಳುವಾಯಿತು. ಸಮಾಜವಾದದ ಸಂದಿಗ್ಧ ಸ್ಥಿತಿಯಲ್ಲಿದ್ದ ಪಟೇಲರನ್ನು ಮತ್ತು ಎಂ.ಪಿ.ಪ್ರಕಾಶರನ್ನ ಯಾವ ಮಠಾಧೀಶರು ಬೆಂಬಲಿಸಲಿಲ್ಲ.ಇಂತಹ ಸಂದರ್ಭದಲ್ಲಿ  ಮಠಾಧೀಶರ ಮತ್ತು ವೀರಶೈವರ ಆಶಾಕಿರಣವಾಗಿ ಗೋಚರಿಸಿದ್ದೇ ಯಡಿಯೂರಪ್ಪ.

ಕಾಂಗ್ರೆಸ್ ವೀರೇಂದ್ರ ಪಾಟೀಲ್ ರನ್ನು ಅಧಿಕಾರದಿಂದ ಕಿತ್ತು ಹಾಕಿದ ನಂತರ,ದೇವೇಗೌಡರ ಕುಟುಂಬ ವೀರಶೈವ ನಾಯಕರನ್ನು ಹಣಿಯತೊಡಗಿದಾಗ , ಕುಮಾರಸ್ವಾಮಿ ಅಧಿಕಾರ ನೀಡದೇ ದ್ರೋಹ ಮಾಡಿದಾಗ ರಾಜ್ಯದ ವೀರಶೈವರಿಗೆ ಅನ್ಯಾಯವಾಯಿತು ಎಂಬಂತೆ ಪ್ರಚಾರ ಮಾಡಿ ಜೊತೆಗೆ ಮಠಾಧೀಶರು ಕೂಡಾ ಒಂದು ಬಾರಿ ನಮ್ಮ ವೀರಶೈವ ಯಡಿಯೂರಪ್ಪ ಅಧಿಕಾರಕ್ಕೆ ಬರಲಿ ಎನ್ನುವ ಮಾತು ಸೇರಿ ಯಡಿಯೂರಪ್ಪ ಮುಖ್ಯಮಂತ್ರಿಯಾದರು.ಆದರೆ ಕರ್ನಾಟಕದ ಮಠಾಧೀಶರ ನಮ್ಮಿಂದಲೇ ಬಿಜೆಪಿ ಆಸ್ತಿತ್ವಕ್ಕೆ ಬಂತು ಎನ್ನುವ ರೀತಿಯಲ್ಲಿ ಯಡಿಯೂರಪ್ಪನನ್ನು , ಮಂತ್ರಿಮಂಡಳವನ್ನು, ಅಧಿಕಾರಿಗಳನ್ನು ಉಪಯೋಗಿಸಕೊಳ್ಳತೊಡಗಿದರು. ಈ ಬಾರಿ ಖುದ್ದು ಮಠಾಧೀಶರೇ ಯಡಿಯೂರಪ್ಪನವರನ್ನು ಬೆಂಬಲಿಸಿದರೂ ಜನತೆ ತಿರಸ್ಕರಿಸುತ್ತಾರೆ ಎಂಬುದನ್ನು ಮಠಾಧೀಶರು ಮರೆಯಬಾರದು.

 ಈ ನಾಡಿನ ಅಸಂಖ್ಯಾತ ಬಡವರಿಗೆ,ದೀನ ದಲಿತರಿಗೆ ಜಾತಿಬೇಧವಿಲ್ಲದೇ ದಾಸೋಹ ಶಿಕ್ಷಣ ನೀಡಿದ ಹಿರಿಮೆ ನಮ್ಮ ಮಠಗಳಿಗೆ ಸಲ್ಲಬೇಕು.ಅಂದು ಜೋಳಿಗೆ ಹಿಡಿದು ಮನೆಮನೆಗೆ ತಿರುಗಿ ಭಿಕ್ಷೆ ಎತ್ತಿ ದಾಸೋಹ ಶಿಕ್ಷಣ ನೀಡಿದ ಸ್ವಾಮೀಜಿಗಳ ಮೌಲ್ಯಗಳು ನಿಮ್ಮ ರಾಜಕಾರಣದ ಪ್ರವೇಶದ ಮೂಲಕ ಹಾಳಾಗುತ್ತಿವೆ.ಇವತ್ತು ಮಠ ಮಾನ್ಯಗಳಿಗೆ ಹಣ ನೀಡಿದಾಗ ವಿರೋಧ ಪಕ್ಷಗಳು ಬೊಬ್ಬೆ ಹಾಕುತ್ತಿವೆ ಆದರೆ ಸರ್ಕಾರ ನೀಡಿದ ಹಣ ಬಡವರ ವಸತಿ ನಿಲಯಕ್ಕೋ ಅಂಧ ಮಕ್ಕಳ ಶಿಕ್ಷಣಕ್ಕೋ ಅನಾಥರ ರಕ್ಷಣೆಗೆ ಬಳಕೆಯಾದರೆ ಸಾರ್ಥಕ . ಅದು ಮಠದ ವಾಣೀಜ್ಯೀಕರಣಕ್ಕೆ ಬಳಕೆಯಾದರೆ ಸಮಾಜ ಒಪ್ಪುವುದಿಲ್ಲ.
ವೀರಶೈವರೊಬ್ಬರು ನಾಡಿನ ಮುಖ್ಯಮಂತ್ರಿಯಾಗಬೇಕೆಂಬ ನಿಮ್ಮ ಹಂಬಲ ಈಡೇರಿದೆ.ಆದರೆ ಭ್ರಷ್ಟಾಚಾರದ ಕೂಪದಲ್ಲಿ ಮುಳುಗಿದ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಮುಂದುವರಿಸಬೇಕೆಂಬ ನಿಮ್ಮ ಆಶಯ ನೆಲದ ಕಾನೂನಿಗೆ ವಿರುಧ್ಧ ಎಂಬುದನ್ನು ಮರೆಯಬಾರದು.ಹಠ ಮಾಡಿ ಮುಖ್ಯಮಂತ್ರಿಯಾಗಲು ಹೊರಟಿರುವ ಯಡಿಯೂರಪ್ಪನವರಿಗೆ ಕರೆದು ಬುಧ್ಧಿ ಹೇಳುವ ದಾಷ್ಟ್ಯತೆ ಪ್ರದರ್ಶನ ಮಾಡಿ ನಿಮ್ಮ ಗೌರವ ಉಳಿಸಿಕೊಳ್ಳಿ.ಮೊದಲು ಯಡಿಯೂರಪ್ಪ ನಿರ್ದೋಷಿಯಾಗಲಿ ಅಲ್ಲವೇ..?
ಕಾಂಗ್ರೆಸ್ ನೊಳಗಿನ ಗುದ್ದಾಟ,ಕಾಲೆಳೆಯುವ ಚಾಳಿ, ಜನತಾದಳದ ಕುಟುಂಬ ರಾಜಕಾರಣ, ಇಲ್ಲಿಯವರೆವಿಗೂ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಗೆಲ್ಲಲು ,ನಡೆಯಲು ಕಾರಣ ಎಂಬುದನ್ನು ಎರಡೂ ಪಕ್ಷಗಳು ಅರಿಯಬೇಕು.ಜನತೆ ಬಿಜೆಪಿ ತಿರಸ್ಕರಿಸಲು ತುದಿಗಾಲಲ್ಲಿ ನಿಂತಿದ್ದರೂ ವಿರೋಧ ಪಕ್ಷಗಳ ಮುಖಂಡರ ಸ್ವ ಪ್ರತಿಷ್ಠೆಯಿಂದಾಗಿ ಜನರ ಆಶಯವನ್ನು ಬಳಸಿಕೊಳ್ಳುವಲ್ಲಿ ಕಾಂಗ್ರೆಸ್,ಜೆಡಿಎಸ್ ಎಡವುತ್ತಿವೆ.ಇನ್ನು ಮುಂದಾದರೂ ಮಠಾಧೀಶರು ಸಮಾಜ ಅಭಿವೃಧ್ಧಿ  ಮಾಡುವ ಜೊತೆಗೆ ನಾಡು ಉಳಿಸಿ ಬೆಳೆಸುವ ನಾಯಕನನ್ನು ಬೆಳೆಸಬಲ್ಲರೇ...?
                                                                                        ಪತ್ರೇಶ್ ಹಿರೇಮಠ್