07 ಡಿಸೆಂಬರ್, 2011

ಬಳ್ಳಾರಿ ಫಲಿತಾಂಶ:ಕರ್ನಾಟಕ ಕಾಂಗ್ರೆಸ್ ಬದಲಾದೀತೇ?

       ಕಾಂಗ್ರೆಸ್ ಗೆ ಕರ್ನಾಟಕ ಕಬ್ಬಿಣದ ಕಡಲೆಯಾಗುತ್ತಿದೆ. ನಾನೊಬ್ಬ ಯುವ ಕಾಂಗ್ರೆಸ್ ಕಾರ್ಯಕರ್ತನಾಗಿ ಹೇಳುವ ಮಾತು. ಬಿಜೆಪಿ ಮತ್ತು ರಾಮುಲು ನಡುವಿನ ಒಳಜಗಳದಲ್ಲಿ ಬಳ್ಳಾರಿಯಲ್ಲಿ ಕಾಂಗ್ರೆಸ್ ಗೆಲ್ಲಬಹುದು ಎಂದು ಇಡೀ ರಾಜ್ಯವೇ ನಿರೀಕ್ಷಿಸಿತ್ತು. ಕಾಂಗ್ರೆಸ್ ನ ಘಟಾನುಘಟಿ ನಾಯಕರೆಲ್ಲಾ ಪ್ರಚಾರ ನಡೆಸಿದರೂ ಕಾಂಗ್ರೆಸ್ ಹಿಂದಿನ ವಿದಾನಸಭಾ ಚುನಾವಣೆಗಿಂತ ಕಡಿಮೆ ಮತಗಳಿಸಿ ಅವಮಾನ ಅನುಭವಿಸಿತು. 

ಮತದಾನ ಎರಡು ಮೂರು ದಿನ ಬಾಕಿ ಇರುವವರೆಗೂ ಅಬ್ಬರದ ವೀರಾವೇಶದ ಪ್ರಚಾರ ನಡೆಸುವ ಕಾಂಗ್ರೆಸ್ ನಾಯಕರು ಮತದಾನ ಹತ್ತಿರವಾದಂತೆ ಬರೀ ತಮ್ಮ ಮಾತುಗಳು, ಆಶ್ವಾಸನೆಗಳನ್ನು ನೀಡುತ್ತಾ ಕ್ಷೇತ್ರ ಬಿಟ್ಟು ತೆರಳುತ್ತಾರೆ. ಯುದ್ಧಕ್ಕೆ ಅಗತ್ಯವಿರುವ ಶಸ್ತ್ರಾಸ್ತ್ರ ಒದಗಿಸದೇ ತಪ್ಪಿಸಿಕೊಳ್ಳುತ್ತಾರೆ ಎಂಬ ಆಪಾದನೆ ಕಾಂಗ್ರೆಸ್ ನಾಯಕರ ಮೇಲಿದೆ. ಚುನಾವಣೆಗೆ ಬಂದು ಪ್ರಚಾರ ಮಾಡುವ ನಾಯಕರು ಕೊನೆಯ ದಿನದ ಕತ್ತಲ ರಾತ್ರಿಯ ಬಗ್ಗೆ ಆಲೋಚಿಸವುದಿಲ್ಲ ಎಂಬುದು ಬಹು ಸಂಖ್ಯಾತ ಕಾಂಗ್ರೆಸ್ ಕಾರ್ಯಕರ್ತರ ಕೊರಗು.ರಾಜ್ಯ ಕಾಂಗ್ರೆಸ್ ನ ಒಬ್ಬ ನಾಯಕರು ಜವಾಬ್ದಾರಿ ಹೊರಲು ತಯಾರಿಲ್ಲ.. ಮುಖ್ಯಮಂತ್ರಿ ಅಭ್ಯರ್ಥಿ ಯಾರು ಎಂದು ಕಾಂಗ್ರೆಸ್ ಹೈಕಮಾಂಡ್ ಸೂಚಿಸಲಿ ಆಗ ನೋಡಿ ಚುನಾವಣೆ ಜವಾಬ್ದಾರಿಯ ಪರಿಸ್ಥಿತಿಯೇ ಬದಲಾಗುತ್ತದೆ. ಮುಖ್ಯಮಂತ್ರಿ ಅಭ್ಯರ್ಥಿಯಾದವರು ಇಡೀ ವ್ಯವಸ್ಥೆಯ ನಿರ್ವಹಣೆ ಮಾಡುತ್ತಾರೆ. ಅಭ್ಯರ್ಥಿಯ ಆಯ್ಕೆಯಿಂದ ಹಿಡಿದು ಜವಾಬ್ದಾರಿ ನೀಡುವವರೆಗೆ ಕಾಂಗ್ರೆಸ್ ನ ವಿಳಂಬ ನೀತಿ ಕಾಂಗ್ರೆಸ್ ಸೋಲಲು ಕಾರಣವಾಗುತ್ತಿದೆ.
 
ಅಭ್ಯರ್ಥಿಯನ್ನು ಎಲ್ಲೋ ಕುಳಿತು ನೇಮಕಗೊಳಿಸುವುದು, ಗೆಲ್ಲುವ ಅಭ್ಯರ್ಥಿಯನ್ನು ಸಾಮಾಜಿಕ ನ್ಯಾಯದ ಕಾರಣಗಳಿಗಾಗಿ ಹಿಂದೆ ಸರಿಸಿ ಬೇರೊಬ್ಬರಿಗೆ ಅವಕಾಶ ನೀಡುವುದು ಕೂಡಾ ಕಾಂಗ್ರೆಸ್ ನಲ್ಲಿ ಕ್ರಿಯಾಶೀಲ ನಾಯಕರು ಸಂಘಟನೆಯಿಂದ ಹಿಂದೆ ಸರಿಯುವ ವಾತಾವರಣ ನಿರ್ಮಾಣವಾಗಿದೆ.ಹಿಂದಿನ ಕಾಂಗ್ರೆಸ್ ತನ್ನದೇ ಆದ ಮತ ಬ್ಯಾಂಕ್ ಹೊಂದಿತ್ತು. ಅಂದಿನ ಕಾಂಗ್ರೆಸ್ ನ ಸಾಂಪ್ರದಾಯಿಕ ಮತಗಳು ಇಂದಿನ ಹಣದ ಮೆರವಣಿಗೆಯಲ್ಲಿ ಎತ್ತಲೋ ಸಾಗುತ್ತಿವೆ.

ಚುನಾವಣೆಯಲ್ಲಿ ಮಾತ್ರ ಕ್ಷೇತ್ರಗಳಿಗೆ ಆಗಮಿಸಿ ಮತ್ತೆ ತಿರುಗಿ ಜಿಲ್ಲೆ ಮತ್ತು ಜನರತ್ತ ನೋಡದ ನಾಯಕರ ಸಂಖ್ಯೆಯೂ ಕಾಂಗ್ರೆಸ್ ನಲ್ಲಿ ಹೆಚ್ಚಾಗುತ್ತಿದೆ.ಚುನಾವಣೆಯಲ್ಲಿ ಭಯಂಕರ ಭಾಷಣ ಮಾಡುವ ನಾಯಕರು ಮತ್ತೆ ಜಿಲ್ಲೆಗೆ ಬರುವುದು ಮತ್ತೆ ಚುನಾವಣೆ ಬಂದಾಗಲೇ ಎಂಬುದು ಗಮನಾರ್ಹ. ಹಣಬಲವುಳ್ಳ ನಾಯಕರು ದೆಹಲಿ ಮಟ್ಟದಲ್ಲಿ ಉತ್ತಮ ಸಂಪರ್ಕಗಳ ಮೂಲಕ ಉನ್ನತ ಹುದ್ದೆ ಪಡೆಯುವ ಮೂಲಕ ಬಲಿಷ್ಠರಾಗುತ್ತಿದ್ದಾರೆ. ಇತ್ತ ಜಿಲ್ಲೆ ಮತ್ತು ಕ್ಷೇತ್ರ ಮಟ್ಟದಲ್ಲಿ ಕಾರ್ಯಕರ್ತರೊಂದಿಗೆ ನಿರಂತರ ಸಂಪರ್ಕವಿಟ್ಟುಕೊಂಡು, ಕಾರ್ಯಕರ್ತರ ಕಷ್ಟ ಸುಖಗಳಿಗೆ ಸ್ಪಂದಿಸುತ್ತಲೇ ಅವರು ಜಿಲ್ಲೆಯನ್ನು ದಾಟದೇ ಕಾಂಗ್ರೆಸ್ ನ ವೀಕ್ಷಕರೆಂಬ ಬಿಳಿಯಾನೆಗಳಿಗೆ ತಲುಪುವುದಿಲ್ಲ. ವೀಕ್ಷಕರೆಂಬ ಬಿಳಿಯಾನೆಗಳು ಪಕ್ಷಕ್ಕೆ ತಳಮಟ್ಟದಲ್ಲಿ ಸಂಘಟಿಸಲು ಶ್ರಮಿಸುವ ಇಂತವರು ಹೈಕಮಾಂಡ್ ಬಳಿಯೂ ಸುಳಿಯುವುದಿಲ್ಲ.

ಹೈಕಮಾಂಡ್ ನ ಸುತ್ತಲೂ ಇರುವ ನಾಯಕರ ಕೃಪಾ ಕಟಾಕ್ಷ ಹೊಂದಿರುವ ಸ್ವಯಂ ಘೋಷಿತ ನಾಯಕರು, ಸುಖಾ ಸುಮ್ಮನೆ ಶ್ರೀ ಮತಿ ಸೋನಿಯಾ ಗಾಂಧಿಯವರನ್ನು ಮತ್ತು ರಾಹುಲ್ ಗಾಂದಿಯವರನ್ನು ಹೊಗಳಿ ಉನ್ನತ ಸ್ಥಾನಕ್ಕೇರುವವರ ಸಂಖ್ಯೆ ಹೆಚ್ಚಾಗುತ್ತಿದೆ.

ಇನ್ನು ಮುಂದಾದರೂ ಕರ್ನಾಟಕ ಕಾಂಗ್ರೆಸ್ ಸಂಘಟಿಸುವ ಯುವಕರಿಗೆ ಪ್ರೋತ್ಸಾಹ ನೀಡುವ ಜೊತೆಗೆ, ಸಾಮಾಜಿಕ ನ್ಯಾಯವೆಂಬ ಒಳ್ಳೆಯ ಸಿದ್ಧಾಂತದಡಿ ಕ್ರಿಯಾಶೀಲ  ನಾಯಕರನ್ನು ಹಿಂದೆ ಸರಿಸದೇ, ಚತುರ ಹಾಗೂ ಜನರ ನಡುವೆ ಬೆರೆಯುವ ಕ್ರಿಯಾಶೀಲ ನಾಯಕರಿಗೆ ಆದ್ಯತೆ ನೀಡಬೇಕಿದೆ. ಜನರ ನಡುವಿರುವ ಜನನಾಯಕರಿಗೆ ಚುನಾವಣೆ ಜವಾಬ್ದಾರಿ ನೀಡಬೇಕಿದೆ.
ಬಳ್ಳಾರಿ ಚುನಾವಣೆ ಫಲಿತಾಂಶ ಇನ್ನು ಮುಂದಾದರೂ ಕಾಂಗ್ರೆಸ್ ಪಥ ಬದಲಿಸಿ.. ಹೊಸ ಹಾದಿ ಹಿಡಿಯಬಹುದೇ..?
                                                   ಪತ್ರೇಶ್ ಹಿರೇಮಠ್

12 ಆಗಸ್ಟ್, 2011

ಸ್ವರೂಪ್ ಕೊಟ್ಟೂರ್ ಲೇಖನ-ಗಣಿಗಾರಿಕೆ ಸ್ಥಗಿತ ಸಂಡೂರಿನ ಮಡಿಲಲ್ಲಿ ಕಳೆದ ಒಂದು ದಿನದ ಅನುಭವದ ಮೆಲಕು

ಗಣಿಗಾರಿಕೆಯಿಂದ ಅಗಣಿತ ಅರಣ್ಯ ಸಂಪತ್ತು ಕರಗಿ ಹೋಗಿರುವ ಸಂಡೂರಿನಲ್ಲಿ ಈಗ ಮೌನ. ``ಕುಂಬಾರನಿಗೆ ವರುಷ ದೊಣ್ಣೆಗೆ ನಿಮಿಷ" ಎಂಬ ಗಾದೆ ಬಳ್ಳಾರಿಯ ಸದ್ಯದ ಸ್ಥಿತಿಗೆ ಅನ್ವರ್ಥ ಅನ್ನಿಸುತ್ತದೆ ಅಲ್ವಾ? ಅದರಲ್ಲೂ ಕಳೆದ ದಶಕಗಳಿಂದ ನಡೆದ ಗಣಿಗಾರಿಕೆಯ ಭರಾಟೆಯಿಂದ ಬಳ್ಳಾರಿ ತರಗುಟ್ಟಿ ಹೋಯಿತು. ಆದರೆ ಈಗ ಕೊಂಚ ನಿರಾಳ!! ನಿಟ್ಟುಸಿರು!!. ಈಗ ಇಲ್ಲಿಯ ಚರಿತ್ರೆಯಲ್ಲಿ ಗಣಿಗಾರಿಕೆಗೆ ಜಾಗವಿಲ್ಲ. ಗಣಿಗಾರಿಕೆ ಮತ್ತು ಅದಿರು ಹೊತ್ತ ಲಾರಿಗಳು ಅಪ್ಪಿ-ತಪ್ಪಿಯೂ ಕಣ್ಣಿಗೆ ಬೀಳುವುದಿಲ್ಲ. ಗಣಿ ಬಾವಿಗಳೆಲ್ಲಾ ಧಣಿವು ಆರಿಸಿಕೊಳ್ಳುತ್ತಿವೆ. ಗಣಿಗಾರಿಕೆಯಲ್ಲಿ ಸಕ್ರೀಯವಾಗಿದ್ದ ಮಾನವ ಹಾಗೂ ಮಿಷನರಿ ಸಂಪನ್ಮೂಲಗಳೆಲ್ಲಾ ಜಡಭರಿತವಾಗಿ ಹೋಗಿವೆ. ಒಂದು ಕಾಲದಲ್ಲಿ ಘರ್ಜಿಸುತ್ತಿದ್ದ ಇವರೆಲ್ಲಾ ಈಗ ಮಕಾಡೆ ಮಲಗಿದ್ದಾರೆ. ಈಗ ಯಾರಾ ಭಯವಿಲ್ಲದೆ ನಿರಾತಂಕವಾಗಿ ಗಣಿಗಾರಿಕೆ ಕರಾಳ ರೂಪವನ್ನು ನೋಡುವ ಸೌಭಾಗ್ಯ!!. ಗಣಿಗಾರಿಕೆ ನಡೆದ ಸ್ಥಳಗಳನ್ನು ನೋಡುತ್ತಾ ಸಾಗಿದಂತೆಲ್ಲಾ ಮನಸ್ಸು ಮರಗುತ್ತಾ ಹೋಗುತ್ತದೆ. ಬಯಲು ಸೀಮೆಯ ಮಲೆನಾಡನ್ನು ಕೆಲವೇ ವರ್ಷಗಳಲ್ಲಿ ಬಟಾ ಬಯಲು ಮಾಡಿದ ಈ ಅಕ್ರಮ ಸಕ್ರಮ ಗಣಿಗಾರಿಕೆ ಭೂತಕ್ಕೆ ಬಲಿಯಾದದ್ದು ಮಾತ್ರ ಶತಮಾನಗಳ ಪಾಕೃತಿಕ ಸಂಪತ್ತು. 
ಸರ್ಕಾರದ ಅದಿರು ರಫ್ತು ನಿಷೇಧ, ಸಿ.ಇ.ಸಿ ಹಾಗೂ ಜಂಟಿ ಗಣಿ ಸರ್ವೆ ತಂಡಗಳ, ಲೋಕಾಯುಕ್ತರ  ನಿರಂತರ ಕಾರ್ಯಚರಣೆ, ಪರಿಸರ ವಾದಿಗಳ ಅಚಲ ಹೊರಾಟ, ಹಸಿರು ಪೀಠದ ಕಟ್ಟಾಜ್ಞೆ, ಇವೆಲ್ಲಾದರ ಪರಿಣಾಮ ಸಂಡೂರಿನ ಗಣಿಗಾರಿಕೆಯ ಸದ್ದು ಅಡಗಿಸಿದೆ. ನೀವು ನಂಬಲ್ಲ. ಒಂದು ಕಾಲದಲ್ಲಿ ಮುಗಿಲು ಚುಂಬಿಸಲು ತವಕಿಸುತ್ತಿದ್ದ ಬೆಟ್ಟಗಳು ಈಗ ಕರಗಿ ಹೋಗಿವೆ. ಸಮತಟ್ಟಾದ ಜಾಗಗಳೆಲ್ಲಾ ಅದಿರಿನ ರಾಶಿಯಾಗಿವೆ. ಗಣಿಧಣಿಗಳ ಪೈಶಾಚಿಕ ಕೃತ್ಯಕ್ಕೆ ಹಸಿರ ನಾಡೆಲ್ಲಾ ಬರಡಾಗಿದೆ. ಭೂಮಿಯನ್ನು ಅನೇಕ ಪದರು-ಪದರುಗಳನ್ನಾಗಿ ಮಾಡಿ ಪಾತಳದವರೆಗೂ ಅದಿರನ್ನು ತೆಗೆಯುವ ಪ್ರಯತ್ನ ಇದುವರೆಗೆ ನಿರಾಂತಕವಾಗಿ ಸಾಗಿದ್ದನ್ನು ಈಗ ನೋಡಿಯೇ ಅನುಭವಕ್ಕೆ ತಂದುಕೊಳ್ಳಬೇಕು. ಹೊರಗಿನವರು ಸಂಡೂರಿಗೆ ಬಂದರೆ ಗರಬಡಿದು ಹೋಗುವುದರಲ್ಲಿ ಅನುಮಾನವೇ ಇಲ್ಲ. ಇಲ್ಲಿಯ ಪ್ರಭಾವಿ ವ್ಯಕ್ತಿಗಳು ತಮ್ಮ ಅತಿ ಆಸೆಗೆ ರೆಕ್ಕೆ ಪುಕ್ಕ ಕಟ್ಟಿ ಕಾನೂನಿನ ಕಣ್ಣಿಗೆ ಮಣ್ಣೆರಚಿ ಹಣ ಬಾಚುವುದಕ್ಕೆ ಅರಣ್ಯವನ್ನೇ ಸರ್ವನಾಶ ಮಾಡಿರುವುದು ಯಾವ ನ್ಯಾಯ? ಇಲ್ಲಿನ ಸಂಪತ್ತನ್ನು ಕೇವಲ ಲಾಭದ ದೃಷ್ಠಿಯಿಂದ ನೋಡಿದ ಗಣಿಧಣಿಗಳು ಪ್ರತಿಯಾಗಿ ಪ್ರಕೃತಿಯ ಲಾಲನೆಗಾಗಿ ಕೈಗೊಂಡ ಕ್ರಮಗಳು ಮಾತ್ರ ಶೂನ್ಯ. 
ಒಂದು ಕಾಲದಲ್ಲಿ ಬಿ.ಪಿ.ಎಲ್ ಕಾರ್ಡ್ ಹೊಂದಿದ್ದ ಅನೇಕರು ಗಣಿಕಾರಿಕೆ ಮಾಡಿ ಲಕ್ಷ್ಮೀ ಪುತ್ರರಾಗಿ ಹೋಗಿದ್ದಾರೆ. ಆದರೆ ಗಣಿಗಾರಿಕೆಯ ಸುತ್ತಾ-ಮುತ್ತಾ ವಾಸಿಸುವ ಜನರ ಬದುಕು ಇನ್ನೂ ಭರ್ಭರ. ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ಪಾಳೆಗಾರಿಕೆ, ನಿರಂಕುಶತ್ವವನ್ನು ಒಪ್ಪಿಕೊಳ್ಳಬೇಕಾದ ಅನಿವಾರ್ಯತೆ ಇವರದ್ದು. ಇಲ್ಲಿಯವರು ಗಣಿಧಣಿಗಳ ಕಪಿಮುಷ್ಠಿಯಲ್ಲಿ ಸಿಕ್ಕಿ ಹಾಕಿಕೊಂಡು ಅವರ ಶೋಷಣೆಗೆ ನಲುಗಿ ಹೋಗಿದ್ದಾರೆ. ಇವರ ಕೂಗು ಈ ಗಣಿಯ ಮಣ್ಣಲ್ಲಿ ಮಣ್ಣಾಗಿ ಹೋಗುತ್ತಿರುವುದು ದೊಡ್ಡ ದುರಂತವೇ ಸರಿ. ಅಂದಹಾಗೆ ಇವರೇನು ಬಿಕಾರಿಗಳಲ್ಲ. ಚಿನ್ನದಷ್ಟೆ ಬೆಲೆ ಬಾಳುವ ಭೂಮಿಯ ಒಡೆಯರಾಗಿದ್ದರೂ ಒಪ್ಪತ್ತು ಊಟಕ್ಕೆ ಪರಿತಪಿಸಬೇಕಾದ ಸಂದ್ಗಿತೆ. ಈ ಅಮಾಯಕರಿಗೆ ಐದಾರು ಸಾವಿರ ರೂ ನೀಡಿ ಆಸೆಗಳನ್ನು ಮೂಗಿಗೆ ಸವರಿ ಇವರ ಬದುಕನ್ನೇ ಸರ್ವನಾಶ ಮಾಡಿದ್ದಾರೆ ಈ ಗಣಿ ಧಣಿಗಳು. ರಾತ್ರಿ ಕಳೆದು ಬೆಳಗಾಗುವುದರೊಳೆಗೆ ಈ ರೈತರ ಜಮೀನು ಮತ್ಯಾರದ್ದೋ ಆಗಲಿದೆ.!! ರೈತರು, ಅಬಲರು ಇಲ್ಲಿ ಗಣಿಧಣಿಗಳ ಮುಂದೆ ದುರ್ಬಲರಾಗುತ್ತಾರೆ. ಇವರ ದಬ್ಬಾಳಿಕೆ ದ್ವನಿ ಎತ್ತದೆ ಮೂಕರಂತೆ ನೋವುಂಡು ತಮ್ಮನ್ನೇ ತಾವು ಸಾಂತ್ವಾನ ಮಾಡಿಕೊಳ್ಳುತ್ತಾರೆ. ಇಲ್ಲಿನ ಅನೇಕ ರೈತರ ಸಾವಿರಾರು ಎಕರೆಗಳು ಈ ಅಕ್ರಮ ಗಣಿಗಾರಿಕೆಯ ಪಾಲಾಗಿರುವುದು ಅಕ್ಷರಸಃ ಸತ್ಯ. ಇದಕ್ಕೆ ಗಣಿಗಾರಿಕೆಯಿಂದ ದ್ವೀಪವಾದ ``ಕಮತ್ತೂರು" ಒಂದು ಜ್ವಲಂತ ಉದಾಹರಣೆ. ಇಲ್ಲಿಯ ಪ್ರತಿಯೊಬ್ಬರದ್ದೂ ಒಂದೊಂದು ಕಥೆ - ವ್ಯಥೆ ಇದೆ. ಮನಸ್ಸು ದುಖ ದುಮ್ಮಾನಗಳಿಂದ ಮಡುಗಟ್ಟಿದೆ. ಮಾತನಾಡಿಸಿದರೆ ಸಾಕು ಇವರ ಸಹನೆಯ ಕಟ್ಟೆ ಹೊಡೆಯುತ್ತದೆ. ಭಾರ ತುಂಬಿದ ಮಾತುಗಳು ಅಪ್ಪಳಿಸುತ್ತವೆ. ಆಕ್ರೋಶ ಆಕ್ರಂಧನ ಮುಗಿಲು ಮುಟ್ಟುತ್ತದೆ. ಅಳುವುದಕ್ಕೂ ಇವರ ಕಂಗಳಲ್ಲಿ ಕಣ್ಣಿರು ಇಲ್ಲ. ಯಾಕೆಂದರೆ ಕಣ್ಣಿರೆಲ್ಲಾ ಬತ್ತಿ ಹೋಗಿವೆ. ಇಲ್ಲಿಯವರು ಮೂಲಭೂತ ಸೌಕರ್ಯ ವಂಚಿತವಾಗಿದ್ದು ಇವರ ಬದುಕು ಬೆಂಗಾಡಾಗಿದೆ. ಇಲ್ಲಿ ಎಲ್ಲವೂ ಆಯೋಮಯ. ಇಂತಹ ಹತ್ತಾರು ಜ್ವಲಂತ ಉದಾಹರಣೆ ಈ ಗಣಿಗಾರಿಕೆ ಸುತ್ತಾ-ಮುತ್ತಾ ನಡೆದಾಡಿದರೆ ಕಣ್ಣಿಗೆ ಬೀಳುತ್ತವೆ. 

ಇದಿಷ್ಟು ಒಂದಡೆಯಾದರೆ ಮೊತ್ತೊಂದಡೆ ಅದಗೆಟ್ಟ, ಕಡಿದಾದ, ದುರ್ಗಮ ರಸ್ತೆಗಳು ಪ್ರಯಾಣಿಕರನ್ನು ಪರದಾಡುವಂತೆ ಮಾಡುತ್ತವೆ. ಮನಸ್ಸು ಮಾಡಿದ್ದರೆ ಗಣಿ ಕಂಪನಿಗಳು ಈ ರಸ್ತೆಗಳನ್ನು ರಹದಾರಿಗಳನ್ನಾಗಿ ಮಾಡಬಹುದಿತ್ತು. ಆದರೆ ಗಣಿಧಣಿಗಳ ಇಚ್ಚಾಶಕ್ತಿಯ ಕೊರತೆ ಹಾಗೂ ಸ್ವಾರ್ಥದ ಸೆಲೆಯಲ್ಲಿ ಇದು ನಗಣ್ಯವಾಗಿದ್ದು ದೊಡ್ಡ ದುರಂತ. ಫಲವಾಗಿ ಇಂದಿಗೂ ಗಣಿಗಾರಿಕೆ, ಅದರು ಸಾಗಾಣಿಕೆ ಮಾಡುತ್ತಿದ್ದ ರಸ್ತೆಗಳು ಮೃತ್ಯು ಕೂಪಗಳಾಗಿವೆ. ಅಳವಾದ ಗುಂಡಿಗಳಲ್ಲಿ ರಸ್ತೆಗಳನ್ನು ಹುಡುಕಬೇಕಾದ ವ್ಯರ್ಥ ಪ್ರಯತ್ನ ಮಾಡಬೇಕಾಗಿದೆ. ಗಣಿಗಾರಿಕೆಗೆ ಅಂಕೆ ಬಿದ್ದಿದ್ದರಿಂದ ಕೊಂಚ ನಿರಾಳ ನಿಟ್ಟುಸಿರು ಬಿಡಬಹುದಾಗಿದೆ. ಜೊತೆ-ಜೊತೆಗೆ ಜರ್ಜಿರತವಾಗಿದ್ದ ಇಲ್ಲಿನ ಪ್ರಕೃತಿ ಮಾತೆ ಮೆಲ್ಲಗೆ ಮೈದಳೆಯುತ್ತಿದ್ದಾಳೆ. ಸಂಡೂರಿನ ಸುತ್ತಾ-ಮುತ್ತಾ ಹೊಸ ಮನ್ವಂತರ ಶ್ರಾವಣ ಮಾಸದ ಪ್ರಾರಂಭದೊಂದಿಗೆ ಶುರುವಾಗಿದೆ.
ಯಾವಗಾಲೂ ಮೋಡ ಕವಿದ ವಾತಾವರಣ, ಜೊತೆಗೆ ಕೂಲ್ ಕೂಲ್ ಹವಾಮಾನ. ಬೀಸುವ ತಂಗಾಳಿ, ತುಂತುರು ಮಳೆ, ಸೂರ್ಯನ ನೆರಳು-ಬೆಳಕಿನ ಆಟ, ತನ್ನ ಮೂಲ ರೂಪಕ್ಕೆ ಬರುತ್ತಿರುವ ಇಲ್ಲಿನ ಸಸ್ಸ ಸಂಕುಲ,ಪಕ್ಷಿಗಳ ಇಂಚರ, ಕೋತಿಗಳ ಚಿನ್ನಾಟ, ನವಿಲುಗಳ ನಾಟ್ಯ ಮನಸ್ಸಿಗೆ ಮುದ ನೀಡುತ್ತದೆ. ಸ್ಟಾಕ್ ಯಾರ್ಡ್ ಗಳಾಗಿದ್ದ ಬೇಸಾಯದ ಭೂವಿಗಳೆಲ್ಲಾ ಮತ್ತೇ ಬೆಳೆಗಳಿಂದ ನಳನಳಿಸುತ್ತಿವೆ. ನೇಗಿಲ ಯೋಗಿ ಹೊಲಗಳಲ್ಲಿ ಉಳುಮೆ ಮಾಡುತ್ತಿದ್ದಾನೆ. ಸ್ವಚ್ಚಂದ ಪರಿಸರಕ್ಕೆ ಇಲ್ಲಿಯವರು ಮೈ ತೆರೆದುಕೊಳ್ಳುತ್ತಿದ್ದಾರೆ. ವಾಕಿಂಗ್ ನ ಸುಖ ಅನುಭವಿಸುತ್ತಿದ್ದಾರೆ. ಕಪಾಟು ಸೇರಿದ್ದ ಬಿಳಿ ಬಟ್ಟೆಗಳೆಲ್ಲಾ ಮೈ ಮೇಲೆ ಕಾಣುತ್ತಿವೆ. ಕೆಮ್ಮು ದಮ್ಮು ನಿಧಾನವಾಗಿ ದೂರವಾಗುತ್ತಿದೆ. ರಸ್ತೆಯ ತುಂಬೆಲ್ಲಾ ಅದಿರು ಲಾರಿಗಳು ಅವರಿಸಿಕೊಳ್ಳುತ್ತಿದ್ದ ಕ್ಷಣಗಳು ಮಾಯವಾಗಿ ದನ-ಕರುಗಳು ಅಡ್ಡಾದಿಡ್ಡಿ ಬರುತ್ತವೆ. ನೆಪಥ್ಯಕ್ಕೆ ಸರಿದಿದ್ದ ಬಯಲು ಸೀಮೆಯ ಮಲೆನಾಡು ಮತ್ತೆ ಆಗತವಾಗು ಎಲ್ಲಾ ಲಕ್ಷಣಗಳು ಗೋಚರವಾಗುತ್ತಿವೆ. ಎಲ್ಲಾ ಪ್ರಾಣಿ-ಪಶು-ಪಕ್ಷಿಗಳು ಸ್ವಂಚ್ಚಂದವಾಗಿ ನಡೆದಾಡುತ್ತಿವೆ. ಕಾಡಿನ ಮಧ್ಯೆ ಅಲ್ಲಲ್ಲಿ ನೀರಿನ ಸೆಲೆಗಳು ನಮ್ಮನ್ನು ಸೆಳೆಯುತ್ತವೆ. ಒಟ್ಟಿನಲ್ಲಿ ಇಷ್ಟು ದಿನ ನಡೆದ ಗಣಿಕಾರಿಕೆಯಿಂದ ಅದಗೆಟ್ಟ ಪರಿಸರ ತಿಬ್ಬಳಿಸಿಕೊಳ್ಳುತ್ತಿದೆ. ಆದರೆ ಗಣಿಕಾರಿತಯನ್ನೇ ಆಶ್ರಯಿಸಿ ಬದುಕುತ್ತಿರುವ ಅನೇಕರ ಬದುಕು ಬೀದಿಗೆ ಬಂದಿರುವುದೂ ಸಹ ಅಷ್ಟೇ ವಾಸ್ತವ. ಅದರೆ ಅರಣ್ಯ ನಾಶದಿಂದ ನಮ್ಮ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎನ್ನುವುದು ನಮ್ಮ ಭ್ರಮೆ ಅಲ್ಲದೆ ಮತ್ತೇನು?

ಇದೆಲ್ಲಾ ಇತ್ತೀಚೆಗೆ ನಾನು ಸುವರ್ಣ 24*7 ನೇದ್ದರ ಕವರೇಜ್ ಸ್ಟೋರಿಯ ವರದಿಗಾರರಾದ ಮೇಡಮ್ ವಿಜಯಲಕ್ಷ್ಮೀಯವರೊಂದಿಗೆ ಸಂಡೂರನ್ನು ಸುತ್ತು ಹಾಕಿದಾಗ ನನ್ನ ಅನುಭವಕ್ಕೆ ಬಂದ ಸಂಗತಿಗಳು. ಇವರೊಂದಿಗೆ ಸಂಡೂರಿನ ಪರಿಸರವಾದಿಗಳಾದ ಶ್ರೀ ಟಿ.ಎಂ ಶಿವಕುಮಾರ್, ಮೂಲಿಮನಿ ಈರಣ್ಣ, ಶ್ರೀಶೈಲ ಮತ್ತು ಸುವರ್ಣದ ಕ್ಯಾಮರಮೆನ್ ಗಳು ಜೊತೆಗಿದ್ದರು. ಯಾದಗಿರಿಯ ಸುವರ್ಣ ವರದಿಗಾರರ ಶ್ರೀ ಅನಂದ ಸೌಧಿ ಇಂತಹ ಒಂದು ಅದ್ಭುತ ಅನುಭವ ಪಡೆಯಲು ಕಾರಣರಾಗಿದ್ದು, ಥ್ಯಾಕ್ಸ್ ಟೂ ಯೂ ಸರ್,

. ಕಾಡು ಇದ್ದರೆ ನಾವು. ಕಾಡನ್ನು ರಕ್ಷಿಸಿದರೆ ಕಾಡು ನಮ್ಮನ್ನು ಕಾಯುತ್ತದೆ. ಈಗಲಾದರೂ ನಮ್ಮ ದುರಾಸೆ, ಎಲ್ಲಾ ಅನಾವಶ್ಯಕ ಅವಶ್ಯಕತೆಗಳನ್ನು ಬದಿಗೊತ್ತಿ ಕಾಡು ಕಾಪಾಡುವ ಕೆಲಸ ಮಾಡೋಣ. ನಾವೆಲ್ಲಾ ಇನ್ನಾದರೂ ಈ ಪ್ರಾಕೃತಿಕ ಸಂಪತ್ತನ್ನು ಉಳಿಸಿ ಬೆಳಸಿಕೊಳ್ಳುವತ್ತ ಮನಸ್ಸು ಮಾಡೋಣ. ಪ್ಲೀಸ್ ಪ್ಲೀಸ್ ಕಾಡು ಬೆಳಸಿ ನಾಡು ಉಳಿಸಿ. 

08 ಆಗಸ್ಟ್, 2011

ರವಿ ಬೆಳಗೆರೆ ಭಾಷೆಯೂ ಮತ್ತು ಸಿಎಂ ಸದಾನಂದಗೌಡರೂ...

ಕರ್ನಾಟಕಕ್ಕೆ ಸಾಹಿತ್ಯದ ವಿಷಯದಲ್ಲೇ ಏಳು ಜ್ಞಾನಪೀಠ ಪ್ರಶಸ್ತಿ ಪಡೆದುಕೊಂಡಿದೆ. ಇಲ್ಲಿ ಒಳ್ಳೆಯ ಬರಹಗಾರರಿದ್ದಾರೆ. ಜೊತೆಗೆ ಬರಹವನ್ನು  ವಿಚಿತ್ರ ಶಬ್ದಗಳ ಬಳಕೆಯಿಂದ ಪತ್ರಿಕೆಯ ಮುಖಪುಟಕ್ಕೆ ಶೀರ್ಷಿಕೆ ನೀಡಿ ಜನರು ತಿರುಗಿ ನೋಡುವಂತೆ ಮಾಡಿರುವ ಸಂಪಾದಕರೂ ಇದ್ದಾರೆ. ಈ ವಾರದ ಹಾಯ್ ಬೆಂಗಳೂರ್ ನೋಡಿದರೆ ಈ ಸಂಗತಿ ನಮಗೆ ವಿದಿತವಾಗುತ್ತದೆ. ದೊಡ್ಡ ರಾಜಕಾರಿಣಿಗಳ ಸಂಬಂಧಗಳನ್ನು ಇದ್ದೋ ಇಲ್ಲದೆಯೋ ವಿಜೃಂಭಿಸುತ್ತಾ ಆ ವಿಷಯ ಬರುಬರುತ್ತಾ ಜನಸಾಮಾನ್ಯರಿಗೂ ವಾಕರಿಕೆಯಾಗಿ ಅಂತಹ ಸಂಬಂಧಗಳನ್ನು ಜನತೆ ಒಪ್ಪುವ ಮಟ್ಟಕ್ಕೆ ಪತ್ರಿಕೆಗಳು ಪ್ರಚಾರ ನೀಡುತ್ತಿವೆ. ಈ ಹಿಂದೆ ಕುಮಾರಸ್ವಾಮಿ ವಿಷಯವನ್ನು ಹೀಗೆ ಅನಗತ್ಯವಾಗಿ ತರಲಾಗತಿತ್ತು. ಯಾರನ್ನೋ ರಂಜಿಸಲು, ಯಾರನ್ನೋ ತೃಪ್ತಿ ಪಡಿಸಲು ಶಬ್ದಗಳನ್ನು ಬಳಸುವಾಗ  ಎಲ್ಲರೂ ಹಿತಮಿತ ಕಾಯುವುದು ಅವಶ್ಯ. ನಾಡಿನಲ್ಲಿ ಪತ್ರಿಕೋದ್ಯಮದಲ್ಲಿ ಪ್ರಖ್ಯಾತರಾದ ಎಲ್ಲಾ ಪ್ರಮುಖ ಪತ್ರಿಕೆಗಳ ಸಂಪಾದಕರು ಯಾಕೆ ಇಂತಹ ಎಡವಟ್ಟು ಮಾಡುತ್ತಾರೋ ಗೊತ್ತಿಲ್ಲ... ಕಷ್ಟ ಸುಖ ಕೀರ್ತಿ,ಅಪಕೀರ್ತಿ ಎಲ್ಲಾ ಅನುಭವಿಸಿದ ಪತ್ರಕರ್ತರೇ ಅಸಹ್ಯ ಶಬ್ದ ಬಳಸಿ ನಾಡಿನ ಪ್ರಮುಖರನ್ನು ಹೀಯಾಳಿಸುವುದು ತರವಲ್ಲ... ರಾಜಕಾರಿಣಿಗಳ ಭ್ರಷ್ಟತನದ ಬಗ್ಗೆ ಅವರ ಕುಟುಂಬದ ಭ್ರಷ್ಟತೆಯ ಬಗ್ಗೆ ಬರೆದರೆ ಕರ್ನಾಟಕದ ಜನತೆ ಖುಷಿ ಪಡುತ್ತಾರೆ. 
        ಒಬ್ಬ ಪತ್ರಕರ್ತ ಗಣಿಲೂಟಿಯನ್ನು ನೋಡಿ ಮೈನಿಂಗ ಮಾಫಿಯಾ ಅಂತ ಬರೆದರೆ ಅದಕ್ಕೆ ವಿರುದ್ಧವಾಗಿ ಅವರ ಜೊತೆ ನಲವತ್ತು ಕಳ್ಳರನ್ನು ಸೇರಿಸಿ ಮತ್ತೊಂದು ಪುಸ್ತಕ ಬರೆದು ಮೊದಲಿನ ಪುಸ್ತಕದಲ್ಲಿರುವವರು ಕಡಿಮೆ ಭ್ರಷ್ಟರು, ನಾನು ಬರೆದಿದ್ದೇನಲ್ಲ ಅದರಲ್ಲಿ ತಿಮಿಂಗಿಲಗಳಿವೆ ಎಂದು ಸಂಪಾದಕೀಯದಲ್ಲಿ ಬರೆಯುತ್ತಾರೆ. ಇತ್ತೀಚೆಗೆ ಗಣಿ ಸಂಬಂಧಿತ ವರದಿಯಲ್ಲಿ ಅಂತಾಹುದ್ದೇನಿಲ್ಲ... ಮುಂದೆ ನೋಡಿ ನಾನು ಸಮಗ್ರ ವಿವರಗಳ ಒಂದು ಪುಸ್ತಕ ತರುತ್ತೇನೆ ಎನ್ನುವ ಬೆಳೆಗೆರೆ ನ್ಯಾಯಮೂರ್ತಿ ಹೆಗಡೆ ಅವರನ್ನೇ ಅನುಮಾನದಿಂದ ನೋಡಿದ್ದಾರೆ. ಕರ್ನಾಟಕದ ಜನತೆ ಹೆಗಡೆಯವರ ಬಗ್ಗೆ ಅಪಾರ ಗೌರವ ಹೊಂದಿರುವಾಗ ತಮ್ಮ ಪತ್ರಿಕೆಯಲ್ಲಿ ಈ ರೀತಿ ಬರೆಯುವುದು ಅವರಿಗೆ ಮುಜುಗರ ನೀಡಿತೋ ಇಲ್ಲವೋ... ? ಲೋಕಾಯುಕ್ತ ಹೆಗಡೆಯವರ ದಾಖಲೆಗಳಲ್ಲಿ ಅಂತಹ ಶಕ್ತಿ ಇಲ್ಲ ಎಂದ ರವಿ ಬೆಳೆಗೆರೆ ತಮ್ಮ ಪತ್ರಿಕೆಗಳ ಬಳಿ ದಾಖಲೆ ಇದ್ದರೆ ಬರೆಯಬಹುದಾಗಿತ್ತು. ನ್ಯೂಸ್ ಚಾನೆಲ್ ಗಳ ವೇಗವಾಗಿ ಸುದ್ದಿ ಕೊಡುವ ಭರವಸೆಯಲ್ಲಿ ಇದ್ದದನ್ನು ಇಲ್ಲದ್ದನ್ನು ಹೇಳುವ ಹಾಗೂ ಪ್ರಾಮುಖ್ಯತೆ ಇಲ್ಲದ ಸುದ್ದಿಗಳಿಗೆ, ವರದಿಗಳಿಗೆ ಆದ್ಯತೆ ನೀಡುತ್ತಿದ್ದಾರೆ.
ಜೊತೆಗೆ ಯಾರೇ ಪತ್ರಕರ್ತರು ರಾಜಕಾರಿಣಿ ,ಸಮಾಜ ಸೇವಕರ ಬಗ್ಗೆ ಬರೆಯುವಾಗ ಭಾಷೆಯ ಮೇಲೆ ಹಿಡಿತವಿಟ್ಟುಕೊಳ್ಳುವ ಕಾಲ ಯಾವಾಗ ಬರುತ್ತೋ....?
ಸದಾ ಮಂದಸ್ಮಿತರಾದ ಸದಾನಂದಗೌಡರು ನಾಡಿನ ಮುಖ್ಯಮಂತ್ರಿಯಾಗಿದ್ದಾರೆ, ಇಂತಹ ಸಂದರ್ಭದಲ್ಲಿ ಅವರಿಗೆ ಮನ ನೋಯುವಂತಹ ಬರಹಗಳ ಬದಲು ಸರ್ಕಾರ ಮುಂದೆ ಮಾಡಬೇಕಾದ ಕೆಲಸಗಳ ಪಟ್ಟಿ ಕೊಡಿರಿ.
ಜಗದೀಶ ಶೆಟ್ಟರ ಗೆ ಹೋಲಿಸಿದರೆ ಸದಾನಂದಗೌಡರು ಮುಖ್ಯಮಂತ್ರಿ ಹುದ್ದೆ ನಿಭಾಯಿಸುವ ಸಾಮರ್ಥೈ ಉಳ್ಳವರು. ಅವರಿಗೆ ನಮ್ಮಿಂದ ಸಲಹೆ ಸಹಕಾರ ಕೊಡೋಣ. ಕೇಂದ್ರದಲ್ಲಿ ಎರಡು ಬಾರಿ ಸಂಸದರಾಗಿ ಕಾರ್ಯ ನಿರ್ವಹಿಸಿರುವುದರಿಂದ ಕೇಂದ್ರದ ಯೋಜನೆಗಳನ್ನು ಸಮರ್ಥವಾಗಿ ಬಳಸಿಕೊಳ್ಳಬಹುದು. ಆ ಬಣ, ಈ ಬಣ ಎನ್ನದೇ ಕರ್ನಾಟಕ ಬಿಜೆಪಿ ಶಾಸಕರು ಗೌಡರಿಗೆ ನಿರಂತರ ಬೆಂಬಲ ನೀಡಿದರೆ ಗೌಡರಿಂದ ಒಳ್ಳೆಯ ಆಡಳಿತ ನಿರೀಕ್ಷಿಸಬಹುದು.ವಿರೋಧ ಪಕ್ಷಗಳು ಅಭಿವೃದ್ಧಿಯ ವಿಷಯದಲ್ಲಿ ಕೈ ಜೋಡಿಸಿದರೆ ಗೌಡರಿಂದ ನಾಡಿಗೆ ಒಳ್ಳೆಯದಾದೀತು.... ಅಲ್ಲವೇ...
                                                                                    ಪತ್ರೇಶ್ ಹಿರೇಮಠ

25 ಜುಲೈ, 2011

ಲೋಕಾಯುಕ್ತ ಸಂತೋಷ ಹೆಗಡೆ ಬಿಜೆಪಿ,ಕಾಂಗ್ರೆಸ್,ಜೆಡಿಎಸ್ ಬೆಕ್ಕುಗಳ ಕೊರಳಿಗೆ ಗಂಟೆ ಕಟ್ಟಿಯಾರೇ....?

ಇದು ಕರ್ನಾಟಕದ ಜನತೆಯ ದುರಂತವೋ ಅಥವಾ ಮೇಯಲು ಕೂತವರ ಕೊನೆ ಗಳಿಗೆಯ ದುರದೃಷ್ಟವೋ...   ಒಟ್ಟಾರೇ ಸರಕಾರ, ಕಾನೂನು, ಆಯೋಗ, ಪೋಲೀಸ್, ವಾರೆಂಟ್, ಗಣಿ ಅಧಿಕಾರಿ ಚೆಕ್ ಪೋಸ್ಟಗಳಿಂದ ತಪ್ಪಿಸಿಕೊಂಡು ದೇಶ ವಿದೇಶಕ್ಕೆ ಆಕ್ರಮವಾಗಿ ಮಣ್ಣು ಮಾರಿದ  ಭಾರೀ ತಿಮಿಂಗಿಲಗಳು, ದೊಡ್ಡ ಮೀನುಗಳು ಈಗ ಲೋಕಾಯುಕ್ತರ ವರದಿಯಲ್ಲಿ ಆರೋಪಿಗಳಾಗಿದ್ದಾರೆ ಎಂಬ ಅಂಶ ವರದಿ ಸೋರಿಕೆಯ ವಿವರಗಳಿಂದ ತಿಳಿದುಬಂದಿದೆ. ಆದರೆ ವರದಿಯ ಸೋರಿಕೆಯಿಂದ ಆ ವರದಿಯ ಪಾವಿತ್ರ್ಯ ಹಾಳಾಗಿದೆ ಎಂಬುದು ಬಿಜೆಪಿ ಆರೋಪವಾದರೆ, ಟೆಲಿಫೋನ್ ಕದ್ದಾಲಿಕೆ ಮೂಲಕ ಬಿಜೆಪಿ ತಪ್ಪು ಮಾಡಿದೆ ಎಂದು ಕಾಂಗ್ರೆಸ್ ಹೋರಾಟ ಆರಂಭಿಸಿದೆ. ಜೆಡಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಬೇಕು ಅನ್ನುತ್ತಲೇ ಕುಮಾರಸ್ವಾಮಿ ನನ್ನ ತಪ್ಪಿದ್ದರೆ ತನಿಖೆಗೆ ಸಹಕಾರ ನೀಡುತ್ತೇನೆ ಎನ್ನುತ್ತಾರೆ.
ಒಟ್ಟಾರೆ ಎಲ್ಲಾ ಪಕ್ಷಗಳ ಮುಖಂಡರು ಗಣಿ ಹಗರಣದ ಬಾವಿಯಲ್ಲಿ ಬಿದ್ದಿದ್ದಾರೆ. ಹಾಗಾಗಿ ಈಗ ಕೆಲ ಪಕ್ಷಗಳು ಗಣಿ ವರದಿಗಿಂತ ಹೆಚ್ಚಾಗಿ ದೂರವಾಣಿ ಕದ್ದಾಲಿಕೆ ಬಗ್ಗೆ ಮಾತನಾಡುತ್ತಿವೆ. ಈ ರಾಜಕೀಯ ಪಕ್ಷಗಳ ಕಣ್ಣು ಮುಚ್ಚಿ ಹಾಲು ಕುಡಿಯುವ ಬೆಕ್ಕುಗಳಿಗೆ ಸಂತೋಷ ಹೆಗಡೆಯವರ ವರದಿ ಗಂಟೆ ಕಟ್ಟೀತೆ ಎನ್ನುವುದು ಯಕ್ಷ ಪ್ರಶ್ನೆ..?
ಇಂದಿನ ಪರಿಸ್ಥಿಯಲ್ಲಿ ಮಾಧ್ಯಮಗಳು ಕೂಡಾ ಅತಿ ವೇಗವಾಗಿ ಸುದ್ದಿ ಕೊಡುವ ನಿಟ್ಟಿನಲ್ಲಿ ಲೋಕಾಯುಕ್ತ ವರದಿಯನ್ನು ಪ್ರಕಟಣೆ ಮಾಡುವ ಮೂಲಕ ಅದರ ಗಾಂಭೀರ್ಯತೆಯನ್ನು ಕೂಡಾ ಕಡಿಮೆ ಮಾಡುವುದರ ಜೊತೆಗೆ ಲೋಕಾಯುಕ್ತರು ವರದಿ ಸಲ್ಲಿಸುವ ಹೊತ್ತಿಗೆ ಗಣಿ ವಿಷಯದ ತೀವ್ರತೆ ಕಡಿಮೆಯಾಗುವಂತೆ ನೋಡಿಕೊಳ್ಳುತ್ತಿದ್ದಾರೆ. 
ಗಣಿ ವರದಿಯಲ್ಲಿ ಪ್ರಸ್ತಾಪಿಸಲಾದ ಎಲ್ಲಾ ನಾಯಕರುಗಳು ಕೂಡಾ ನಾನೇನು ತಪ್ಪು ಮಾಡಿಲ್ಲ ವರದಿ ಬಂದ ನಂತರ ಪ್ರತಿಕ್ರಿಯೆ ನೀಡುತ್ತೇನೆ ಎನ್ನುತ್ತಿದ್ದಾರೆ. ಇದೆಲ್ಲದರ ನಡುವೆ ಕರ್ನಾಟಕ ಕಂಡ ಗೌರವಾನ್ವಿತ ಮುಖ್ಯಮಂತ್ರಿ ಯಡಿಯೂರಪ್ಪ ನಾನೇನು ತಪ್ಪು ಮಾಡಿಲ್ಲ , ನಾನು ಅಧಿಕಾರಕ್ಕೆ ಬಂದ ಮೇಲೆ ಯಾವುದೇ ಗಣಿಗಾರಿಕೆಗೆ ಪರವಾನಿಗೆ ನೀಡಿಲ್ಲ ಎನ್ನುತ್ತಿದ್ದಾರೆ.
ಕರ್ನಾಟಕದ ಜನತೆಗೆ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎನ್ನುವ ಮನೋಭಾವ ಉಳ್ಳವರು ಹಾಗಾಗಿ ಸುಮ್ಮನಿದ್ದಾರೆ. ಆದರೆ ಯಾವ ಪಕ್ಷದ ರಾಜಕಾರಿಣಿಗಳಿಗೂ (ಕೆಲ ನಾಯಕರನ್ನು ಹೊರತು ಪಡಿಸಿ) ಗಣಿ ವರದಿ ಅನುಷ್ಠಾನವಾಗುವುದು ಬೇಕಿಲ್ಲ. ಎಲ್ಲರ ಕೈಗಳೂ ಗಣಿಯ ಕೆಂಪು ಧೂಳಿನಲ್ಲೂ ಹೂತು ಹೋಗಿವೆ. ಕಳ್ಳನ ಕೈಯಲ್ಲೂ ಬೀಗ ಕೊಟ್ಟರೂ ರಾಜ್ಯ ಚೆನ್ನಾಗಿರುತ್ತೆ ಆದರೆ ರಾಜಕಾರಿಣಿಗಳ ಕೈಯಲ್ಲಿ ಇರೋದಿಲ್ಲ ವೆಂದು ಸಾರ್ವಜನಿಕರು  ಮಾತನಾಡಿಕೊಳ್ಳುವಂತಾಗಿದೆ.
30 ಸಲ ಕೋರ್ಟ ವಾರೆಂಟ್ ಕಳುಹಿಸಿದರೂ ನ್ಯಾಯಾಲಯಕ್ಕೆ ಹಾಜರಾಗದ ಮಂತ್ರಿಗಳು, ಮುತ್ತಿಕ್ಕಿ ಫೋಟೋ ತೆಗೆಸಿಕೊಳ್ಳುವ ಮಂತ್ರಿಗಳೀಗ ಅಮಲಿನ ಮಂತ್ರಿಗಳಾಗಿದ್ದಾರೆ. ಲಕ್ಷಕ್ಕೆ ಮೆಡಿಕಲ್ ಕಾಲೇಜಿನ ಸೀಟು ಮಾರಿದ ಮಂತ್ರಿಗಳಿದ್ದಾರೆ. ಕಾನೂನನ್ನೇ ಗಾಳಿಗೆ ತೂರಿ ಭೂಗಳ್ಳತನ, ಆಕ್ರಮ ಗಣಿಗಾರಿಕೆ , ಲಂಚ, ಸ್ವಜನ ಪಕ್ಷಪಾತ, ಇಂತಹ ಗುರುತರ ಆರೋಪ ಹೊತ್ತಿರುವ ಮಂತ್ರಿಗಳಿಂದ ರಾಜ್ಯದ ಜನತೆಗೆ ನ್ಯಾಯ ಸಿಕ್ಕೀತೆ...? 
ಕರ್ನಾಟಕದ ಅದೃಷ್ಟವೋ ಅಥವಾ ಭ್ರಷ್ಟರ ನಿಗ್ರಹಕ್ಕೆ ದೇವರೇ ಕಳುಹಿಸಿದ ವರವೋ ನ್ಯಾಯಮೂರ್ತಿ ಸಂತೋಷ ಹೆಗಡೆ ಎಂಬ ಬೆಳಕು ಕರ್ನಾಟಕಕ್ಕೆ ಹೊಸದಾರಿ ತೋರಿಸುತ್ತಿದೆ. ನಾಡು ಕಂಡ ಗಣ್ಯಾತಿಗಣ್ಯ ನಾಯಕರು, ಹಣದ ಸೊಕ್ಕಿನಲ್ಲಿ ಮೆರೆದವರು, ಬಲದ ಗರ್ವದಿಂದ ಉರಿದವರು, ಪಕ್ಷಗಳ ರಕ್ಷಣೆಯಲಿ ಉಳಿದವರು ಪರಪ್ಪನ ಅಗ್ರಹಾರ ಸೇರಬಹುದೇ...?
ಲೋಕಾಯುಕ್ತರಂತೂ ಒಂದು ಮಾತನ್ನಂತೂ ಈಗಾಗಲೇ ಹೇಳಿದ್ದಾರೆ, "ಕರ್ನಾಟಕ ಸರ್ಕಾರ ಈ ವರದಿಯನ್ನು ಆಧರಿಸಿ ಕ್ರಮ ಕೈಗೊಳ್ಳಲಿ ಬಿಡಲಿ ಈ ವರದಿಯಿಂದ ಸುಪ್ರೀಂಕೋರ್ಟನಲ್ಲಿ ನ್ಯಾಯ ಸಿಗುವ ವಿಶ್ವಾಸ ವ್ಯಕ್ತ ಪಡಿಸಿದ್ದಾರೆ.
ಇಂತಹ ಅಪರೂಪದ ನ್ಯಾಯಮೂರ್ತಿಗಳು, ಯು.ವಿ.ಸಿಂಗ್, ಗೋಕುಲ್, ಶೆಟ್ಟಿ ರಂತಹ ಅಧಿಕಾರಿಗಳು ಇರುವುದರಿಂದ ಭಾರತ ಮತ್ತು ಕರ್ನಾಟಕ ಮಾತೆ ಉಸಿರಾಡುತ್ತಿದ್ದಾಳೆ ... ಅಲ್ಲವೇ.....?
                                            
                                                          ಪತ್ರೇಶ್ ಹಿರೇಮಠ್

30 ಜೂನ್, 2011

ಚಪ್ಪಲಿ ಶೂ, ಸಾಕ್ಸ್ ಹಾಕಿಕೊಂಡು ದೋಣಿ ಹತ್ತಬಾರದು...? ಏಕೆ...?

ಈಗಲೂ ಭಾರತದ ಕೆಲ  ಹಳ್ಳಿಗಳಲ್ಲಿ ಅಥವಾ ಎಲ್ಲಿಯೇ ಆಗಲಿ ನದಿ ದಾಟಲು ನದಿ, ಹೊಳೆಯಲ್ಲಿ  ದೋಣಿ ಹತ್ತುವಾಗ ದೋಣಿಯ ನಾವಿಕರು, ಇಲ್ಲವೇ ಬೋಟ್ ಅಪರೇಟರ್ ಗಳು ಚಪ್ಪಲಿ, ಶೂ, ಬಿಟ್ಟು ದೋಣಿ ಹತ್ತಿ ನದಿ,ಗಂಗಾಮಾತೆ ಹಾಗಾಗಿ ಚಪ್ಪಲಿ ಕೈಯಲ್ಲಿ ಹಿಡಿದುಕೊಂಡು ಹತ್ತಿ ಎಂದು ಕೂಗುತ್ತಾರೆ. 
 ಯಾಕೆ ಚಪ್ಪಲಿ ಬಿಡಬೇಕು ಹೇಗೂ ದೋಣಿಯಲ್ಲಿ ಹೋಗುತ್ತೀವಲ್ಲ ಎಂದು ಕೇಳಿ ನೋಡಿ ಅವರ ಉತ್ತರ ಒಂದೇ ತಾಯಿ ಗಂಗಾಮಾತೆಯ ಮೇಲೆ ಹೋಗುವಾಗ ಚಪ್ಪಲಿ ಹಾಕಿಕೊಳ್ಳಬಾರದು ಎನ್ನುತ್ತಾರೆ. ಅದರಲ್ಲು ಕೆಲ ಸಂಪ್ರದಾಯ ವಿರೋಧಿಗಳು ನಾವೇನು ಚಪ್ಪಲಿ ಶೂ ಧರಿಸಿ ನೀರಿಗೆ ಇಳಿಯುತ್ತಿಲ್ಲವಲ್ಲ  ಎಂದು ವಾದಿಸುತ್ತಾರೆ.
ಕೊನೆಗೂ ನಾವಿಕರ ಉತ್ತರ ಚಪ್ಪಲಿ ಬಿಟ್ಟು ಹತ್ತುವುದಾದರೆ ಹತ್ತಿ ಇಲ್ಲಾಂದ್ರೆ ಕೇಳಗೆ ಇಳೀರಿ.....
ಇದು ದೋಣಿಯಲ್ಲಿ ನದಿ ದಾಟುವಾಗ ಎಲ್ಲರಿಗೂ ಆಗುವ ಅನುಭವ.... ಅಲ್ಲವೇ..?
 ಇದರ ಉದ್ದೇಶ ಇಷ್ಟೆ.....
ಹೊಳೆ ಅಥವಾ ನದಿ ದಾಟುವಾಗಿನ ಸಂದರ್ಭಗಳಲ್ಲಿ  ದೋಣಿ ಅಪಾಯಕ್ಕೆ ಈಡಾಗಿ ಮುಳುಗುವ ಅಥವಾ ಜೋರಾಗಿ ಗಾಳಿಬೀಸಿ ದೋಣಿ ನಿಯಂತ್ರಣ ತಪ್ಪಿದರೆ, ಅಥವಾ ನಡುನೀರಿನಲ್ಲಿ ದೋಣಿ ಸುಳಿಗೆ ಸಿಲುಕಿದರೆ ಹಾಗೂ ದೋಣಿಯೊಳಗಡೆ ನೀರು ಬರಲಾರಂಭಿಸಿದರೆ ದೋಣಿ ಅಥವಾ ಯಾಂತ್ರೀಕೃತ ದೋಣಿಗಳು ಕೂಡಾ ಮುಳುಗುವ ಸಂಭವವೇ ಹೆಚ್ಚು..  ಹಾಗಾಗಿ ದೋಣಿ ಮಳುಗಿದ ಸಂದರ್ಭದಲ್ಲಿ  ಕಾಲಲ್ಲಿ ಚಪ್ಪಲಿ ಅಥವಾ ಶೂ, ಸಾಕ್ಸ್ ಧರಿಸಿದ್ದಲ್ಲಿ  ಒಂದು ವೇಳೆ ದೋಣಿ ಮುಳುಗಿದರೆ ಈಜಲು ಬರುವುದಿಲ್ಲ.  ನೀರಿನಲ್ಲಿ ಬಿದ್ದ ಮೇಲೆ ಶೂ ಕಳಚುವುದು, ಸಾಕ್ಸ್ ಕಳಚುವುದು, ಚಪ್ಪಲಿ ಕಳಚುವುದು ಅಸಾಧ್ಯದ ಮಾತು. ಜೀವ ಭಯದ ನಡುವೆ ನೀರಲ್ಲಿರುವಾಗ ಚಪ್ಪಲಿ, ಶೂ, ಸಾಕ್ಸ್ ಕಳಚುತ್ತಾ ನಿಂತರೆ ಬದುಕಲು ಸಾಧ್ಯವೇ.....?
ಹಾಗಾಗಿ ಹಿರಿಯರು ಇಂತಹ ಅಪಾಯವನ್ನು ಗ್ರಹಿಸಿ ದೇವರು ಮೇಲೆ ಭಯ ಹಾಕಿ" ಗಂಗಾ ಮಾತೆ ದಾಟುವಾಗ ಚಪ್ಪಲಿ ಹಾಕಬಾರದು" ಎಂಬ ನಂಬಿಕೆಯನ್ನು ದೈವದ ಭಯದಲ್ಲಿ ಸೃಷ್ಟಿಸಿದ್ದಾರೆ.
ಈಗಿನವರಿಗೆ ದೋಣಿ ಹತ್ತುವ ಮುನ್ನ ಚಪ್ಪಲಿ ಯಾಕೆ ಹಾಕಿಕೊಳ್ಳಬಾರದು ಎಂದಾಗ ಮೇಲಿನ ಸತ್ಯ ಹೇಳಿದರೆ ದೋಣಿ ಮುಳುಗಿದಾಗ ಬಿಚ್ಚುತ್ತೇವೆ ಎನ್ನತ್ತಾರೇನೋ....?
ಹಾಗಾಗಿಯೇ ಹಿರಿಯರು ದೇವರ ಭಯದಲ್ಲಿ ಬದುಕಿಗೆ ಹಾಗೂ ಜೀವಕ್ಕೆ ಉಪಯುಕ್ತವಾದ  ಇಂತಹ ನಂಬಿಕೆ  ಜಾರಿಯಲ್ಲಿಟ್ಟಿದ್ದಾರೆ.  ಇದು ನನಗನಿಸಿದ್ದು ..... ಇದಕ್ಕೆ ನೀವೇನಂತೀರಿ.....?


                                                                                        ಪತ್ರೇಶ್ ಹಿರೇಮಠ್

25 ಜೂನ್, 2011

ಹೊಸದಾಗಿ ಮದುವೆಯಾದವರು ಕಾರ ಹುಣ್ಣಿಮೆ ದಿನ ಕರಿ ಹರಿಯುವಾಗ ಹೊರಗೆ ಯಾಕೆ ಹೋಗಬಾರದು...?

ಕಾರಹುಣ್ಣಿಮೆ ದಿನ ಎತ್ತುಗಳನ್ನು ಕರಿ ಹರಿಯುವಾಗ ಹೊಸದಾಗಿ ಮದುವೆಯಾದೆವರು ಹೊರಗಡೆ ಹೋಗಬಾರದು ಎಂಬ ಪ್ರತೀತಿ ಈಗಲೂ ಹಳ್ಳಿಗಳಲ್ಲಿ ಇದೆ. ಇಂದಿಗೂ ಹಳ್ಳಿಗಳಲ್ಲಿ ಹೊಸ ಮದುಮಗನನ್ನು ಹೊರಗೆ ಬಿಡುವುದಿಲ್ಲ. ಇತ್ತೀಚಿನ ಕೆಲವರು ಇದನ್ನು ಮೂಢನಂಬಿಕೆ ಎಂದು ಮೂಗು ಮುರಿಯುತ್ತಾರೆ.
 ಆದರೆ ಹಿಂದಿನವರು ಇಂತಹ ಪ್ರತೀತಿಗಳನ್ನು ಸುಮ್ಮನೆ ಮಾಡಿರುವುದಿಲ್ಲ.  ನಮ್ಮ ಹಿಂದಿನ ಹಿರಿಯರ ಪಧ್ಧತಿ, ಪ್ರತೀತಿ, ನಂಬಿಕೆಗಳನ್ನು ಇವತ್ತಿನ ಪೀಳಿಗೆಯ ನಾವುಗಳು ಮೂಢನಂಬಿಕೆ ಎಂದು ಮೂದಲಿಸುತ್ತೇವೆ. ಆದರೆ ಹಿರಿಯರು ಮಾಡಿದ ಈ ನಂಬಿಕೆ ಅಂದಿನ ಕಾಲಕ್ಕೆ ಸತ್ಯವೂ ಆಗಿದೆ ಇಂದಿಗೂ ಹಳ್ಳಿಗಳಲ್ಲಿ ಕೃಷಿ ಅವಲಂಬಿತ ಯುವಕರಿಗೂ ಅನ್ವಯಿಸುತ್ತದೆ. ಹಿಂದೆ ನಗರ ಪ್ರದೇಶಗಳಲ್ಲಿ ನೌಕರಿ ಮಾಡುವ ಯುವಕರ ಸಂಖ್ಯೆ ಕಡಿಮೆ ಇತ್ತು. ಜೊತೆಗೆ ಬಹಳಷ್ಟು ಹಳ್ಳಿಗಳ ಯುವಕರು ಬೇಸಾಯದ ಮೇಲೆಯೇ ಜೀವನ ಸಾಗಿಸುತ್ತಿದ್ದರು. ಕೃಷಿಯ ಮೂಲವಾದ ಎತ್ತುಗಳನ್ನು ಯುವಕರು ಅತ್ಯಂತ ಪ್ರೀತಿಯಿಂದ ಸಾಕುತ್ತಾರೆ.
ಅವರಿಗೆ ತಮ್ಮ ಎತ್ತುಗಳು ಕಾರ ಹುಣ್ಣಿಮೆಯಲ್ಲಿ ಕರಿ ಹರಿಯುವಾಗ ಮೊದಲ ಸ್ಥಾನದಲ್ಲಿ ಬರಬೇಕು ಎಂಬ ಆಸೆ ಇರುತ್ತದೆ. ಆದರೆ ಎತ್ತುಗಳು ಓಡಿ ಗೆಲ್ಲಲು ಸಾಕಿ ಜೋಪಾನ ಮಾಡಿದ ಯುವಕನೂ ಎತ್ತುಗಳ ಹಿಂದೆ ಓಡುತ್ತಾ ಹುರಿದುಂಬಿಸಬೇಕು. ಆಗ ಮಾತ್ರ ಎತ್ತುಗಳು ಗೆಲ್ಲಲು ಸಾಧ್ಯ. ಆದರೆ ಎತ್ತುಗಳ ಹಿಂದೆ ಓಡುವುದು ಅಪಾಯಕಾರಿ ಕೆಲಸ, ಅಲ್ಲಿ ಆಪತ್ತು ಕಾದಿರುತ್ತದೆ. ಹಾಗಾಗಿ ಹೊಸದಾಗಿ ಮದುವೆಯಾದವರ ಪ್ರಾಣಕ್ಕೆ ತೊಂದರೆಯಾಗಲಿ ಅಥವಾ ಮೈ ಕೈಗೆ ಅನಾಹುತವಾಗದಿರಲಿ ಎಂಬರ್ಥದಲ್ಲಿ ಈ ನಂಬಿಕೆ ಪ್ರಚಲಿತದಲ್ಲಿದೆ. ಇದು ನನ್ನ ಯೋಚನಾಮಟ್ಟಕ್ಕೆ ಹೊಳೆದ ಸಂಗತಿ ... ಇದಕ್ಕೆ ನಿಮ್ಮ ಅಭಿಪ್ರಾಯವೇನು......?

25 ಮೇ, 2011

ಅಗ್ನಿ ಪರೀಕ್ಷೆ ಗೆದ್ದ ಯಡಿಯೂರಪ್ಪ ಇನ್ನು ಮುಂದಾದರೂ ಕರ್ನಾಟಕದ ಮರೆಯಲಾಗದ ಮುಖ್ಯಮಂತ್ರಿಯಾಗುತ್ತಾರಾ....?


ಇತ್ತೀಚೆಗೆ ಕರ್ನಾಟಕದ ಜನತೆ ರಾಜಕಾರಿಣಿಗಳ ದೊಂಬರಾಟದಿಂದ ಬೇಸತ್ತಿರುವದನ್ನು ನೋಡಿದರೆ ಮುಂದೊಂದು ದಿನ ರಾಜಕಾರಿಣಿಗಳು ಎಂದರೆ ವಾಕರಿಕೆ ತರುವವರು ಎನ್ನಿಸಬಹುದೇನೋ..? ಯಡಿಯೂರಪ್ಪ ಹಸಿರು ಶಾಲು ಹೊದ್ದು ರೈತರ ಹೆಸರಲ್ಲಿ ಪ್ರಮಾಣ ವಚನ ಸ್ವೀಕರಿಸಿದಾಗಿನಿಂದ ಪ್ರಾಮಾಣಿಕವಾಗಿ ಮಾಡುತ್ತಾ  ಬಂದಿರುವ ಕೆಲಸವೆಂದರೆ ತಮ್ಮ ಮುಖ್ಯ ಮಂತ್ರಿ ಸ್ಥಾನ ಉಳಿಸಿಕೊಳ್ಳಲು ಹೋರಾಟ ನಡೆಸಿರುವುದೇ ಇರಬೇಕು. ಬಂಡಾಯ  ಎದ್ದಾಗಲೆಲ್ಲಾ ದೆಹಲಿ, ದೇವಸ್ಥಾನ , ಮಠ ಸುತ್ತುತ್ತಾ ಅಧಿಕಾರದಲ್ಲಿ ಉಳಿದಿರುವ ಯಡಿಯೂರಪ್ಪನವರಿಗೆ ಪಕ್ಷದೊಳಗಿನ ಹಿತಶತೃಗಳ ಕಾಟವೇ ಅತಿಯಾಗಿ ಕುರ್ಚಿ ರಕ್ಷಣೆಗೆ ಕೊಟ್ಟ ಸಮಯದಲ್ಲಿ   ಅರ್ಧ ಸಮಯ ಜನತೆಗೂ ನೀಡಿದ್ದರೂ  ಕರ್ನಾಟಕ ಕಂಡ ಯಶಸ್ವಿ ಆಡಳಿಗಾರರಾಗುತ್ತಿದ್ದರು. ಸುಮಾರು ನಲವತ್ತು ರ್ಷಗಳಿಂದ ಎರಡು   ಸ್ಥಾನದಿಂದ ಬಿಜೆಪಿ ನೂರಾ ಹತ್ತು ಸ್ತಾನಕ್ಕೇರಲು ಯಡಿಯೂರಪ್ಪನವರ ಶ್ರಮ ಬಹು ದೊಡ್ಡದು. ಅದೆಲ್ಲಕ್ಕಿಂತ  ಹೆಚ್ಚಾಗಿ ಕಳೆದ ಎರಡು ದಶಕಗಳಿಂದ ಕರ್ನಾಟಕದಲ್ಲಿ  ವೀರಶೈವ ನಾಯಕತ್ವದ ಕೊರತೆಯನ್ನು ಸಮರ್ಥವಾಗಿ ಬಳಸಿಕೊಂಡು ಮುಖ್ಯಮಂತ್ರಿ ಹುದ್ದೆ  ಪಡೆಯುವಲ್ಲಿ ಯಶಸ್ವಿಯಾದರು. 

40 ವರ್ಷಗಳ ಸುದೀರ್ಘ ಹೋರಾಟದಿಂದ ಹಂತ ಹಂತವಾಗಿ ಮೇಲೆ ಬಂದ ಯಡಿಯೂರಪ್ಪ  ಇಷ್ಟು ಬೇಗ ತಮ್ಮ ಕುಟುಂಬದವರನ್ನು ಆಡಳಿತದಲ್ಲಿ ಹಸ್ತಕ್ಷೇಪ ಮಾಡಲು ಬಿಡುತ್ತಾರೆ ಎಂದು ಯಾರು ನಿರೀಕ್ಷಿಸಿರಲಿಲ್ಲ. ಹಠವಾದಿ ಯಡಿಯೂರಪ್ಪ ನವರು ತಮ್ಮ ಮುಂಗೋಪದಿಂದ ಶಾಸಕರ ವಿಶ್ವಾಸ ಕಳೆದುಕೊಳ್ಳುತ್ತಾರೆ ಎಂಬ ಮಾತು ಕೂಡಾ ಚಾಲ್ತಿಯಲ್ಲಿದೆ. ಅನೇಕ ತಪ್ಪುಗಳನ್ನು ಮಾಡಿ ಮುಂದೆ ನಾನು ಈ ತರಹ ವರ್ತಿಸುವುದಿಲ್ಲ...... ಮುಂದೆ ಬೇರೆ ಯಡಿಯೂರಪ್ಪನನ್ನು ನೋಡ್ತೀರಿ... ದೇವಸ್ಥಾನದಲ್ಲಿ ಪ್ರಮಾಣ ಮಾಡಿ ಹೇಳ್ತೇನೆ ಮುಂದೆ ರಾಜ್ಯದ ಜನತೆಗಾಗಿ ದುಡಿಯುತ್ತೇನೆ... ರಾಜ್ಯದ ಅಭಿವೃಧ್ಧಿಗಾಗಿ ಸಂಕಲ್ಪ ಮಾಡುತ್ತೇನೆ ಎನ್ನುತ್ತಲೇ ಇರುವ ಯಡಿಯೂರಪ್ಪ ನವರನ್ನು ಕರ್ನಾಟಕದ ಮುಂದಿನ ದಿನಗಳಲ್ಲಿ ನೆನಪಿಡುವ ರೀತಿಯಲ್ಲಿ ಕೆಲಸ ಮಾಡುತ್ತಾರಾ..? ಎನ್ನುವುದು ಜನರ ಪ್ರಶ್ನೆ. 
           ಜನರ ವಿರೋಧಕ್ಕಿಂತಲೂ ಹೆಚ್ಚು ತಮ್ಮ ಪಕ್ಷದ ಶಾಸಕರ,ರಾಜ್ಯಪಾಲ ಭಾರಧ್ವಾಜ್ ಹಾಗೂ ವಿರೋಧ ಪಕ್ಷಗಳ ಟೀಕೆ ಎದುರಿಸಿದ ಕರ್ನಾಟಕದ ಪ್ರಥಮ ಮುಖ್ಯಮಂತ್ರಿ ಎಂದರೆ ಯಡಿಯೂರಪ್ಪನವರೇ ಇರಬಹುದು. ಇಷ್ಟೆಲ್ಲಾ ಅಗ್ನಿ ಪರೀಕ್ಷೆ ಎದುರಿಸಿ ಮುಖ್ಯಮಂತ್ರಿಯಾಗಿ ಉಳಿದಿರುವ ಯಡಿಯೂರಪ್ಪನವರು ರಾಜ್ಯ ಮರೆಯಲಾಗದಂತಹ ಮುಖ್ಯಮಂತ್ರಿಯಾಗಲು ಇನ್ನು ಕಾಲಾವಕಾಶವಿದೆ.
               ಇನ್ನು ಮುಂದಾದರೂ ಸಂಪುಟದಲ್ಲಿ ಶುಧ್ಧ ಹಸ್ತವುಳ್ಳ ಮಂತ್ರಿಗಳನ್ನು ಇಟ್ಟಕೊಂಡು, ಆಡಳಿತದಲ್ಲಿ ತಮ್ಮ ಕುಟುಂಬದವರ ಹಸ್ತಕ್ಷೇಪ ಇರದಂತೆ, ಭ್ರಷ್ಟಾಚಾರ ರಹಿತ ಆಡಳಿತ ನೀಡುವತ್ತ ಆಲೋಚಿಸಬೇಕಿದೆ. ನಾಡಿನ ಜೀವನಾಡಿಯಾದ ರೈತರಿಗೆ ಗುಣಮಟ್ಟದ ವಿದ್ಯುತ್ , ಬೀಜ ಗೊಬ್ಬರ, ಮೂಲಭೂತ ಸೌಲಭ್ಯ ರಾಜ್ಯದ ಮೂಲೆ ಮೂಲೆಗೂ ದೊರಕುವ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಬೇಕಿದೆ. ಅಪರೇಶನ್ ಕಮಲ ನಿಲ್ಲಿಸಿ ಬಡ, ದೀನ ದಲಿತ ಜನರ ಎದೆಯಲ್ಲಿ ನೆಮ್ಮದಿಯ ಕಮಲ ಅರಳಿಸುವತ್ತ ಯಡಿಯೂರಪ್ಪನವರ ಆಡಳಿತ ಸಾಗಲಿ ಎಂದು ಕರ್ನಾಟಕ ಬಯಸುತ್ತದೆ ಅಲ್ಲವೇ...?  
                                                            ಪತ್ರೇಶ್ ಹಿರೇಮಠ್ 

24 ಮೇ, 2011

ಪ್ರೀತಿ ಪ್ರೇಮ ಸಂಗಾತಿಗಳಲ್ಲಿ ವ್ಯಾಸಂಗಕ್ಕೆ ಸ್ಪರ್ಧೆ, ಚೈತನ್ಯ ಮೂಡಿಸಬೇಕಲ್ಲವೇ?- ಪತ್ರೇಶ್ ಹಿರೇಮಠರ ಲೇಖನ

ಪ್ರೀತಿ ಪ್ರೇಮ ಇವೆರಡೂ ಶಬ್ದಗಳು ಎಷ್ಟೋ ಯುವಕರನ್ನು ಉತ್ಸಾಹದ ಚಿಲುಮೆಯಲ್ಲಿ ನಲಿದಾಡಿಸುತ್ತವೆ. ಇವೆರಡೂ ಶಬ್ದಗಳನ್ನು ನಂಬಿ ಕೆಲವರು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರೀತಿಯ ಬಗ್ಗೆ ಯಾವ ವಿಜ್ಞಾನಿಯು ನಿಖರವಾಗಿ ಹೇಳಲಾರ. ಅದೊಂದು ಸುಪ್ತ ಅನುಭವ. ಅನುಭವಿಸಿದ ಪ್ರೇಮಾನುಭಾವಿಗಳಿಗೆ ಗೊತ್ತು. ಆದರೆ ವಿದ್ಯಾಭ್ಯಾಸ ಸಮಯದಲ್ಲಿ ಪ್ರೀತಿ ಎಷ್ಟು ಸೂಕ್ತ? ಎನ್ನುವ ಪ್ರಶ್ನೆ ಗಮನಾರ್ಹ.
               ಪ್ರೀತಿ ಹುಟ್ಟುವುದೇ ಆಕಸ್ಮಿಕ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆ ಪ್ರೀತಿಯನ್ನು ಸಂಯಮದಿಂದ ದೀರ್ಘಕಾಲ ಕಾಪಾಡಿಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕಲೆ ಎಲ್ಲಾ ಯುವಕ ಯುವತಿಯರಿಗೂ ಬರುವುದಿಲ್ಲ. ಪ್ರೀತಿ ಹುಣ್ಣಿಮೆ ಚಂದ್ರನಂತೆ ಯುವಕ ಯುವತಿಯರ ಮನಸ್ಸನ್ನು ಹೊಕ್ಕು ನವಿರಾದ ಮಧುರ ಭಾವನೆಗಳನ್ನು ಹರಿಸಿ, ಕನಸಿನ ಲೋಕದಲ್ಲಿ ವಿಹರಿಸಿ, ಉನ್ಮಾದದಲ್ಲಿ ತೇಲಾಡಿಸಿ ಕೊನೆಗೆ ಅಮವಾಸ್ಯೆಯ ಕಗ್ಗತ್ತಲ ರೂಪದಲ್ಲಿ ಪ್ರೇಮಿಗಳನ್ನು , ಅವರ ಕುಟುಂಬದವರನ್ನು ಕಾಡತೊಡಗುತ್ತದೆ.ಬೇರ್ಪಟ್ಟ ಭಗ್ನ ಪ್ರೇಮಿಗಳು ಪ್ರೀತಿಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.


     ತಂದೆ ತಾಯಿ ಮಕ್ಕಳ ಭವಿತವ್ಯದ ಬಗೆಗೆ ಅಪಾರ ಕನಸಿಟ್ಟು ಓದಲು ಕಳಿಸುತ್ತಾರೆ. ಓದುವ ಸಮಯದಲ್ಲಿ ಪ್ರೀತಿಯ ಹೆಸರಲ್ಲಿ ಸಮಯ ವ್ಯರ್ಥಗೊಳಿಸಿ ಜೀವನ ಹಾಳು ಮಾಡಿಕೊಳ್ಳುವ ಬದಲು ಚೆನ್ನಾಗಿ ಓದಿ, ಬದುಕಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಂಡು ಮನಸ್ಸಿಗೆ ಇಷ್ಟವಾದ,
ನಿಮ್ಮ ಹವ್ಯಾಸ ಭಾವನೆಗಳಿಗೆ ಹೊಂದಿಕೊಳ್ಳುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಸ್ವರ್ಗವನ್ನೇ ಧರೆಗಿಳಿಸಬಹುದು. ತಂದೆ ತಾಯಿ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂಬ ದೂರಾಲೋಚನೆಯಿಂದ ನಮ್ಮ ಹಿತಕ್ಕಾಗಿಯೇ ಯೋಚಿಸುತ್ತಿದ್ದಾರೆಂಬುದನ್ನು ಮರೆಯದಿರಿ. ನಿಮ್ಮ ಆಯ್ಕೆ ನಿಮ್ಮ ತಂದೆ ತಾಯಿಗಳಿಗೂ ಒಪ್ಪಿಗೆಯಾದರೆ ಜಗತ್ತಿನಲ್ಲಿ ನಿಮ್ಮಂತ ಅದೃಷ್ಟಶಾಲಿಗಳು ಯಾರೂ ಇಲ್ಲವೆಂದು ತಿಳಿಯಿರಿ........ ಪ್ರೀತಿಯ ಮಾಯೆ ಮೈಮನಗಳ ಹೊಕ್ಕರೆ ಯಾರ ಹಿತನುಡಿಯು ಪ್ರೀತಿ ಎಂಬ ಪ್ರೇತ ಹೊಕ್ಕ ಪ್ರೇಮಿಗಳ ದಪ್ಪ ಚರ್ಮವನ್ನು ತಲುಪಲಾರದು. 

ಪ್ರೀತಿಯೆಂದರೆ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದು.ಪ್ರೀತಿ ಪ್ರೀತಿಸುವವರ ಬದುಕಿಗೆ ಪರಸ್ಪರ ಪೂರಕ ಹಾಗೂ ಚಾಲೆಂಜಿಂಗ್ ಆಗಿರಬೇಕು. ಪ್ರೀತಿ ಸಂಗಾತಿಗಳನ್ನು ಸ್ಪರ್ಧಾತ್ಮಕವಾಗಿ ಅಧ್ಯಯನ ಮಾಡಲು, ದುಡಿಯಲು ಪ್ರೇರೇಪಿಸುವಂತಿರಬೇಕು.
    ಪ್ರೀತಿಸಿ, ಪ್ರೀತಿಗೆ ಸಂಯಮವಿರಲಿ, ನಿಮ್ಮ ಬದುಕಿನೆಡೆಗೆ ಗುರಿಯಿರಲಿ, ಗುರಿ ತಲುಪಿದಾಗ ನಿಮ್ಮ ಆಲೋಚನಾ ಮಟ್ಟ ಬದಲಾಗಿರುತ್ತದೆ. ಆಗ ನಿಮ್ಮ ಕನಸುಗಳಿಗೆ ಬಣ್ಣ ಕೊಡಿರಿ. ಸಾರ್ಥಕ್ಯ ಆಯ್ಕೆ ನಿಮ್ಮದಾಗಿರುತ್ತದೆ. ಇಲ್ಲದಿದ್ದರೆ ಪ್ರೀತಿಯ ಮಾಯೆಯಲ್ಲಿ ಬಿದ್ದು ಮಾಡಿಕೊಂಡ ಆಯ್ಕೆಯ ಬಗ್ಗೆ ಜೀವನದ ಕೊನೆವರೆಗೂ ಪರಿತಪಿಸಬೇಕಾಗುತ್ತದೆ.
              ಒಂದು ವೇಳೆ ಪ್ರೀತಿಯ ಮಾತು ಕೇಳಿ ವಿದ್ಯಾಭ್ಯಾಸ ಕಡೆಗಣಿಸಿದ್ದೀರಾದರೆ ಅದು ನಿಮ್ಮ ತಪ್ಪಲ್ಲ , ವಯೋಸಹಜ ಮನೋಧರ್ಮ. ಕಾಲ ಮಿಂಚಿ ಹೋಗುವ ಮುನ್ನ ತಿದ್ದಿಕೊಳ್ಳಿ. ಸಂಗಾತಿಗಳಿಬ್ಬರೂ ಮೊದಲು ಓದಿನ ಕಡೆ ಗಮನ ಕೊಡಿ. ಜೀವನ ಅನುಭವಿಸಲು ಸಾಕಷ್ಟು ಸಮಯವಿದೆ. ಆದರೆ ಓದುವ ಸುವರ್ಣ ಯುಗ ಮುಂದೆ ಬೇಕೆಂದರೂ ಸಿಗದು.
               ಪ್ರೀತಿಯನ್ನು ಕೊಲ್ಲಿ ಎಂದೂ ಯಾರೂ ಹೇಳುವುದಿಲ್ಲ? ಆದರೆ ನಿಮ್ಮ ಪ್ರೀತಿ ನಿಮ್ಮಿಬ್ಬರನ್ನು ಸುಖವಾಗಿ ಬದುಕಿಸುತ್ತಾ ಅಂತಾ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಹಾಗೂ ಸಮಾಜ ಕೇಳುತ್ತದೆ. ಸುಖವಾಗಿ ಬದುಕುವ ಹಾಗೂ ಬದುಕಿಸುವ ಸಾಮರ್ಥ್ಯ ನಿಮಗೆ ಬರಬೇಕಾದರೆ ಮೊದಲು ವ್ಯಾಸಂಗ ಮಾಡಿ ನಂತರ ನಿಮ್ಮ ಗುರಿ ತಲುಪಿ ಪ್ರೀತಿಯೆಂಬ ಮಾಯಾಂಗನೆಯನ್ನು ನಿಮ್ಮಿಷ್ಟದಂತೆ ಹುಡುಕಿಕೊಳ್ಳಿ....                   
                 ಈಗಲೂ ಎಷ್ಟೋ ಯುವಕ ಯುವತಿಯರು ತಮ್ಮ ಸಂಗಾತಿ ಚೆನ್ನಾಗಿ ಓದಲಿ, ನೌಕರಿಗೆ ಹೋಗಲಿ ಎಂದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾರೆ. ಇನ್ನು ಕೆಲವರು ಅವರ ಓದನ್ನು ಲೆಕ್ಕಿಸದೇ ಪ್ರೇಮ ವಿವಾಹವೆಂಬ ಬಲವಂತದ ಮಾಘ ಸ್ನಾನಕ್ಕೆ ನೂಕುತ್ತಾರೆ.ಮದುವೆ ನಂತರದ ಅವರ ಜೀವನ ಅನುಭವಿಸಿದವರಿಗಷ್ಟೇ ಗೊತ್ತು..?
     ಪ್ರಿಯರೇ.. ಓದುವಾಗ ಎಲ್ಲರೂ ಪ್ರೀತಿಸುತ್ತಾರೆಂದು ನೀವು ಪ್ರೀತಿಸಲು ಹೋದೀರಿ....
ಅವಸರದ ಪ್ರೀತಿ ಅವನತಿಗೆ ದಾರಿ......
( ಪ್ರಜಾವಾಣಿ ಯುವಜನ ವಿಭಾಗದಲ್ಲಿ ಪ್ರಕಟಗೊಂಡ ಲೇಖನ)
ಪತ್ರೇಶ್ ಹಿರೇಮಠ್ 

22 ಮೇ, 2011

ಪತ್ರೇಶ್ ಹಿರೇಮಠರ ಕವನ- - - ಎಲ್ಲಿದ್ದೀಯಾ ಜೋಗಿ ಜಂಗಮನೇ...?


ಅಂಗೈಯಲ್ಲಿ ಲಿಂಗ ಹಿಡಿದು 
ಅವರಿವರ ಮನೆಯ ಫ್ರೇಮಿನಲ್ಲಿ ಕುಳಿತರಷ್ಟೇ ಸಾಲದು..
ನೀ ಬಿತ್ತಿದ ನುಡಿಯು, ಮನೆ ಮನಗಳ ತಟ್ಟಬೇಕು..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಸಮಾನತೆಯ ಮಾನದಂಡಸಾರಿ 
ಬಿಜ್ಜಳನ ತಲೆಯ ಮೇಲೆ ಹೇರಿ
ಸಿರಿ ಸಂಪದವ ತ್ಯಜಿಸಿ ಹೊರಟವನೇ
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಹೆಣ್ಣು ಗಂಡೆನ್ನಲಿಲ್ಲ, ಮೇಲು ಕೀಳೆನ್ನಲಿಲ್ಲ,
ಉಳ್ಳವರ  ಎದೆಯಲ್ಲಿ ಅಳುಕು ಮೂಡಿಸಿ,
ಮಂಟಪದ ನಡುವೆ ಎಲ್ಲರನು ಕೂರಿಸಿದ ಯೋಗಿ,
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಸ್ಥಾವರಕ್ಕಳಿವುಂಟು ಜಂಗಮಕ್ಕಳಿವಿಲ್ಲವೆಂದೆ,
ಈಗೀಗ  ಊರೂರ ಕಂಟಿಯಲಿ ಮಠಮಾನ್ಉದ ಅಂಟುಗಳು,
ಜಂಗಮರ ತಲೆಗೀಗ ಹತ್ತಿದೆ ಕಿಲುಬು ಜಂಗು,
ನೀ ಹ್ಯಾಂಗ ಹೇಳಿದೆಯೋ, ಜಂಗಮಕ್ಕಳಿವಿಲ್ಲ..? ಸುಳ್ಳಾಯಿತಲ್ಲ..?
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಬೇಕಾದಷ್ಟು ತಂದು ಜೊತೆಗೂಡಿ ಉಂಡು,
ಅದುವೇ ನೀನಂದೇ ದಾಸೋಹ..
ಈಗೀಗ ಹೆಂಡತಿ ಮಕ್ಕಳ ಹೆಸರಲ್ಲೂ ಸ್ವಾಹಃ
ಅತ್ತೆ ಸೊಸೆ ಹೆಸರಲ್ಲೂ ಸ್ವಾಹಃ
ನೈಸ್, ಗಣಿ, 2ಜಿ, ಕಾಮನ್ವೆಲ್ತ್, ಸತ್ಯಂ ಷೇರುಗಳಲ್ಲೂ 
ಸಾವಿರ, ಲಕ್ಷ ಲಕ್ಷ ಕೋಟಿ ಸ್ವಾಹಾಃ
ಎಲ್ಲಿದೆ ಜೋಗಿ ಜಂಗಮನೇ ನಿನ್ನ ದಾಸೋಹ..?
ಈಗ  ಹುಳು ಹತ್ತಿದ ಅಕ್ಕಿಯ ಬಿಸಿಯೂಟವೆಂಬ ಅಕ್ಷರ ದಾಸೋಹ....

ಕರೆಂಟೀಗ ಕರದಂಟಿನಷ್ಟೆ ಅಪರೂಪ.
ಛಳಿಗಾಲದಲ್ಲೂ ರೈತರಿಗೆ ಚೀನಾ ಪ್ರವಾಸ.
ಕಂಪ್ಯೂಟರಲ್ಲಿ ನೇಗಿಲು ಹಿಡಿಯದವರ ಕೃಷಿ ಮಾಹಿತಿ
ಸಣ್ಣ ದೊಡ್ಡ ಸಮಸ್ಯೆಗೊಂದು ಆಯೋಗ
ಹೋದಲೆಲ್ಲಾ ಕೋಟಿ ಕೋಟಿ ಯೋಜನೆಯ ಆಶ್ವಾಸನೆಯ ಸುರಿಮಳೆ
ಸತ್ತ ರೈತರ ಶವ ಸುಡಲು ಸಾವಿರ ರೂಪಾಯಿ ಇನಾಮು..
ಬಿತ್ತನೆಗೆ ಬೀಜ ಗೊಬ್ಬರ ಕೇಳಿದರೆ ಎದೆಗೆ ಗುಂಡು..
ಕಟ್ಟೆ ಪುರಾಣದ ಹಿರಿಯರ ಚಾ ಖರ್ಚಿಗೆ ತಿಂಗಳಿಗೆ ನಾನ್ನೂರು ರೂಪಾಯಿ..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

ಬರುವುದಾದರೇ ಬೇಗ ಬಾ, ಹಾಗೆ ಬರಬೇಡ..?
ಲಿಂಗದ ಬದಲು ಬಂದೂಕು ತುಂಬಾ ಗುಂಡುಗಳಿರಲಿ..
ನಿನ್ನ ವಚನದ ಜೋಳಿಗೆಯ ತುಂಬಾ ಬಾಂಬುಗಳಿರಲಿ...
ವಿಭೂತಿಪುಡಿ ಬದಲು ಅಂಥ್ರಾಕ್ಸ ನ ಪುಡಿ ಇರಲಿ..
ಹಸಿದು ನಿಂತವರ ರಕ್ತ ಹೀರುವ ವೇಷಧಾರಿಗಳ ಮೇಲೆ..
ಬಂದೂಕು, ಬಾಂಬು, ಆರ್ ಡಿಎಕ್ಸ್ ನ ಪುಡಿ ಚೆಲ್ಲು..
ಹಸಿದು ನಿಂತವರಿಗೆ ಅನ್ನ ಸಿಗಲಿ
ಬಡವರ ಮುಖದಲ್ಲಿ ನಗುವಿನ ಪರಿಮಳ ಹರಡಲಿ..
ಎಲ್ಲಿದ್ದೀಯಾ..? ಜೋಗಿ ಜಂಗಮನೇ ಎದ್ದು ಬಾ  ಎದ್ದು ಬಾ....

                                                      
                                                                                          ಪತ್ರೇಶ್ ಹಿರೇಮಠ್

                                                                                                                         

ಪರಿಸರ ಪ್ರೇಮಿ ಗ್ರೀಟಿಂಗ ಕಾರ್ಡ್ ಮತ್ತು ಶಾಸಕ ನಾಗೇಂದ್ರರ ಪಿಎ ಡಾ|| ವೆಂಕಟಗಿರಿ ದಳವಾಯಿಯವರ ಶ್ರಮವೂ.....


ಬಳ್ಳಾರಿ ಜಿಲ್ಲೆಯ ಹಿಂದುಳಿದ ಹಾಗೂ ವಿವಿಧ ವೈಶಿಷ್ಟ್ಯ ಹೊಂದಿರುವ ಕೂಡ್ಲಿಗಿ  ಕ್ಷೇತ್ರದ ಪರಿಸರ ಪ್ರೇಮಿ ಶಾಸಕ ನಾಗೇಂದ್ರರ  ಆಪ್ತ ಸಹಾಯಕ ಡಾ || ವೆಂಕಟಗಿರಿ ದಳವಾಯಿಯವರ  ವಿಶಿಷ್ಟ ಪ್ರಯತ್ನವಿದು. ಸಮಗ್ರ ಕೂಡ್ಲಿಗಿ ತಾಲೂಕಿನ ಪರಂಪರೆಯನ್ನೇ ಬಿಂಬಿಸುವಂತಹ ಗುಡ್ಡಗಾಡು, ಬೆಟ್ಟ, ಅರಣ್ಯ ಪ್ರದೇಶ, ಅಪರೂಪದ  ಔಷಧಿ ಸಸ್ಯಗಳು, ಕಾಡುಪ್ರಾಣಿಗಳು,ಶಿಲಾಯುಗದ ಪಳಯುಳಿಕೆಗಳು, ವೀರಗಲ್ಲು, ಮಾಸ್ತಿಗಲ್ಲು, ಕಿಲಾರಿ ವಂಶಸ್ಥರು, ಬುಡಕಟ್ಟು ಜನರು ಹಾಗೂ ಕೂಡ್ಲಿಗಿ ತಾಲೂಕಿನ ಕಲೆ ಸಂಸ್ಕೃತಿಯನ್ನು ಶಾಸಕರು ಹಬ್ಬ ಹರಿದಿನಗಳಲ್ಲಿ  ಶುಭಾಶಯ ಕಳುಹಿಸುವ ಶುಭಾಶಯ ಪತ್ರಗಳಲ್ಲಿ ಬಳಸಿಕೊಳ್ಳಲಾಗಿದೆ.
ಈ ಶುಭಾಶಯ ಪತ್ರದ ಚಿತ್ರಗಳಲ್ಲಿ ತಾವು ನೋಡುವಂತೆ ಶುಭಾಶಯ ಪತ್ರಗಳಿಗೆ ಸುಗಂಧಿ ಬಳ್ಳಿ, ನೆಲಬೇವು, ಕಾಡುಬಿಕ್ಕೆ, ಹೀಗೆ ವಿವಿಧ  ಔಷಧಿ ಸಸ್ಯಗಳ ನೈಜ  ಎಲೆಗಳನ್ನೇ  ಶುಭಾಶಯ ಪತ್ರಗಳಿಗೆ ಅಂಟಿಸಿ ಅದರ ಅಡಿ ಇದನ್ನು ಯಾವ ಕಾಯಿಲೆಗಳಿಗೆ ಉಪಯೋಗಿಸಬಹುದು ಎಂಬುದನ್ನು ವಿವರಿಸಲಾಗಿದೆ. 
                             ಮುಖಪುಟದಲ್ಲಿ ಶಾಸಕ ನಾಗೇಂದ್ರರ ಚಿತ್ರದ ಜೊತೆಗೆ ಅಪರೂಪದ ಪ್ರಾಣಿಗಳ ಚಿತ್ರ, ನಂತರ  ಎರಡನೆಯ ಪುಟದಲ್ಲಿ ಅಪರೂಪಕ್ಕೆ ಕಾಣಸಿಗುವ ಪುಷ್ಪಗಳ ಸುಂದರ ಚಿತ್ರಗಳು, ಮೂರನೆಯ ಪುಟದಲ್ಲಿ ನೈಜ  ಔಷಧಿ ಸಸ್ಯಗಳ ಎಲೆಗಳನ್ನೆ ಕಾಡಿನಿಂದ ಹುಡುಕಿ ತಂದು ಅಂಟಿಸಿದ್ದಾರೆ. ನಾಲ್ಕನೆಯ ಪುಟದಲ್ಲಿ ಕೂಡ್ಲಿಗಿ ತಾಲೂಕಿನ ಶಿಲಾಯುಗದ ಕುರುಹುಗಳಿರುವ ಕುಮತಿಯ ಶಿಲಾಯುಗದ ರಕ್ಕಸಗಲ್ಲು ಮತ್ತು ರಕ್ಕಸಮಟ್ಟಿಯ ಚಿತ್ರಗಳನ್ನು ಹಾಕಿ ಶುಭಾಶಯ ಪತ್ರ ರಚಿಸಲಾಗಿದೆ.ಈ ಶುಭಾಶಯ ಪತ್ರಗಳ ವಿಶೇಷವೇನೆಂದರೆ ನೈಜ ಸಸ್ಯಗಳನ್ನೇ ಶುಭಾಶಯ ಪತ್ರಕ್ಕೆ ಅಂಟಿಸಿರುವುದು. ಕಾಡಿಗೆ ಹೋಗಿ ಅಪರೂಪದ ಸಸ್ಯಗಳನ್ನು ಹುಡುಕಿ ತಂದು ಹಚ್ಚುವ ಕೆಲಸ ಸುಲಭದ್ದಲ್ಲ.
                                             ಶಾಸಕ ನಾಗೇಂದ್ರರ  ಈ ಪ್ರಯತ್ನಕ್ಕೆ ಮೆದುಳಾಗಿ ಕೈ ಹಾಕಿ ಈ ಯೋಜನೆ ಯಶಸ್ವಿಗೊಳಿಸುವಲ್ಲಿ ಅವರ ಆಪ್ತ ಸಹಾಯಕ  ಡಾ|| ವೆಂಕಟಗಿರಿ ದಳವಾಯಿಯವರ ಶ್ರಮವೂ ಪ್ರಮುಖ ಕಾರಣ. ಡಾ|| ದಳವಾಯಿ ಮೂಲತಃ ಪಿಹೆಚ್ ಡಿ ಪದವೀಧರರು,ಉಪನ್ಯಾಸಕರಾಗಿ ಸೇವೆ ಸಲ್ಲಿಸಿದವರು, ಹೊಸ ಹೊಸ ಯೋಜನೆಗಳ ಮೂಲಕ ಕ್ಷೇತ್ರದಲ್ಲಿ ಬದಲಾವಣೆಗೆ ಶಾಸಕರೊಂದಿಗೆ ಕೈ ಜೋಡಿಸಿದವರು. ಶಾಸಕರ ಆಪ್ತ ಸಹಾಯಕ ಹುದ್ದೆಯ ಜೊತೆ ಶಾಲೆಗಳಲ್ಲಿ ಉಪನ್ಯಾಸ, ನಾಟಕ ಪ್ರದರ್ಶನ, ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆ ಮಾಡುವ ಮೂಲಕ ಕಲೆ, ಸಂಸ್ಕೃತಿ, ಸಾಹಿತ್ಯ, ಶೈಕ್ಷಣಿಕ ಅಭಿವೃಧ್ಧಿ ಗಾಗಿ ಶ್ರಮಿಸುತ್ತಿದ್ದಾರೆ.
ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಆಪ್ತ ಸಹಾಯಕ  ಡಾ|| ವೆಂಕಟಗಿರಿ ದಳವಾಯಿಯವರಂತೆ ನಾಡಿನ ಎಲ್ಲಾ ಶಾಸಕರು, ಹಾಗೂ ಆಪ್ತ ಸಹಾಯಕರು, ಜನಪ್ರತಿನಿಧಿಗಳು, ಹಿರಿಯ ಅಧಿಕಾರಿಗಳು ಇಂತಹ ಹೊಸ ಹೊಸ ಕಾರ್ಯಕ್ಕೆ ಕೈ ಹಾಕಿದರೆ ನಾಡಿನ ಜನರಲ್ಲಿ ಪರಿಸರ, ಸಂಸ್ಕೃತಿ, ಇತಿಹಾಸ ಪ್ರೇಮ ಉಳಿದೀತಲ್ಲವೇ..?
ಕೂಡ್ಲಿಗಿ ಶಾಸಕ ನಾಗೇಂದ್ರ ಹಾಗೂ ಆಪ್ತ ಸಹಾಯಕ ||ವೆಂಕಟಗಿರಿ ದಳವಾಯಿಯವರಿಗೆ ತಮ್ಮದೊಂದು ಅಭಿನಂದನೆ ಸಲ್ಲಿಸಿ 

ಡಾ||ವೆಂಕಟಗಿರಿ ದಳವಾಯಿ ಮೊಬೈಲ್...9448234280








ಪತ್ರೇಶ್ ಹಿರೇಮಠ
ಹಗರಿಬೊಮ್ಮನಹಳ್ಳಿ





21 ಮೇ, 2011

ಪ್ರಕಟಣೆಗಾಗಿ ಬರಹಗಾರರಿಂದ ಅಪ್ರಕಟಿತ ಕೃತಿಗಳ ಆಹ್ವಾನ



ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕು ಬಸರಕೋಡಿನ "ಕೊಹಿಮ ಪಬ್ಲಿಕೇಶನ್ಸ್" ವತಿಯಿಂದ ಪ್ರಕಟಣೆಗಾಗಿ ಬರಹಗಾರರಿಂದ ಹತ್ತು (10) ಅಪ್ರಕಟಿತ ಕೃತಿಗಳನ್ನು  ಆಹ್ವಾನಿಸಲಾಗಿದೆ. ಹತ್ತು ಕೃತಿಗಳಲ್ಲಿ ಕವನ ಸಂಕಲನ, ಕಥಾ ಸಂಕಲನ, ಲಲಿತ ಪ್ರಬಂಧ, ನಾಟಕ(ಸಾಮಾಜಿಕ ಹೊರತು ಪಡಿಸಿ) ಐತಿಹಾಸಿಕ,ಪೌರಾಣಿಕ ಪ್ರಸಿದ್ಧರ ವ್ಯಕ್ತಿ ಚಿತ್ರಗಳು, ಪ್ರಾಥಮಿಕ ಹಾಗೂ ಪ್ರೌಢಶಾಲಾ ಮಕ್ಕಳಿಗೂ ಅರ್ಥವಾಗುವಂತಹ ವಿಜ್ಞಾನಲೇಖನಗಳು,ವಿಜ್ಞಾನಿಗಳ ಪುಸ್ತಕಗಳಿಗೆ ಆದ್ಯತೆ ನೀಡಲಾಗುವುದು.ಆಸಕ್ತ ಬರಹಗಾರರು ತಮ್ಮ ಅಪ್ರಕಟಿತ ಕೃತಿಗಳನ್ನು ಡಿ.ಟಿ.ಪಿ. ಮಾಡಿಸಿ ಅದರ ಎರಡು ಪ್ರತಿಗಳನ್ನು ತಮ್ಮ ಇತ್ತೀಚಿನ ಸ್ಪಷ್ಟ ವಿಳಾಸ ಮೊಬೈಲ್ ಸಂಖ್ಯೆ ಅಥವಾ ಸ್ಥಿರ ದೂರವಾಣಿ ಸಂಖ್ಯೆಯೊಂದಿಗೆ ಈ ಕೆಳಕಂಡ ವಿಳಾಸಕ್ಕೆ ಅಂಚೆಯ ಮೂಲಕ ಕಳುಹಿಸಲು ಕೋರಲಾಗಿದೆ. ಕೃತಿ ಸ್ವಾಮ್ಯ ಪ್ರಕಾಶಕರದಾಗಿರುತ್ತದೆ.


ವಿಳಾಸ:-


ಪತ್ರೇಶ್ ಹಿರೇಮಠ್
ಪ್ರಕಾಶಕ
"ಕೊಹಿಮ ಪಬ್ಲಿಕೇಶನ್ಸ್"
ಬಸರಕೋಡು (ಅಂಚೆ) 583224
ಹಗರಿಬೊಮ್ಮನಹಳ್ಳಿ (ತಾಲೂಕು)
ಬಳ್ಳಾರಿ (ಜಿ)
ಜಂಗಮ:- 9844338881
ಸ್ಥಿರ :- 08397249044

20 ಮೇ, 2011

ಪತ್ರೇಶ ಹಿರೇಮಠ ರ ಒಂದು ಕವನ - ಸತ್ತ ಸಮುದ್ರ




ನೀ ನನ್ನ ಮರೆತೆಯಾದೊಡೆ,ನಾನು
ರೆಕ್ಕೆ ಪುಕ್ಕವಿಲ್ಲದ ಹಕ್ಕಿ,
ಮೋಡಗಳಿಲ್ಲದ ಆಕಾಶ,
ಹರ್ಷವಿಲ್ಲದ ನಾಟಕೀಯ ನಗು....

ನೀ ನನ್ನ ಮರೆತೆಯಾದೊಡೆ, ನಾನು
ಕಳೆಯಿಲ್ಲದ ಚಂದ್ರ,
ಉದುರಿಬೀಳುವ ಉಲ್ಕೆ ನಕ್ಷತ್ರ
ದೂರದಲ್ಲಿನ ಅಸ್ಪಷ್ಟ ಪುಂಜ

ನೀ ನನ್ನ ಮರೆತೆಯಾದೊಡೆ, ನಾನು
ಬತ್ತಿದ ಒಣ ಒರತೆ,
ತೆರೆಯ ಆರ್ಭಟವಿಲ್ಲದ,
ಸತ್ತ ಸಮುದ್ರ...

ನೀ ನನ್ನ ಮರೆತೆಯಾದೊಡೆ, ನಾನು
ಫಸಲಿಲ್ಲದ ಎರೆ ನೆಲ,
ಚಿಗಿತಂತೆ ಕಂಡೂ ಬಾಡುವ ಬೆಳೆ,
ಮಳೆಗೆ ಕಾಯುವ ಬಿರಿ ಬಿಟ್ಟ ಭೂಮಿ....
ನೀ ನನ್ನ ಮರೆತೆಯಾದೊಡೆ, ನಾನು
ಮುಂಜಾವಿನ ಚಿತ್ರವಿಲ್ಲದ ಕನಸು,
ನೋವಿನಿಂದ ನರಳುವ,
ಯಾಂತ್ರಿಕ ಜೀವಂತ ದೇಹ.......


ಪತ್ರೇಶ್  ಹಿರೇಮಠ್
ಹಗರಿಬೊಮ್ಮನಹಳ್ಳಿ

ರಾಜ್ಯಸಭಾ ಸದಸ್ಯ ಅನಿಲ್ ಲಾಡ್ ರ ಲೋಕಪ್ಪನಹೊಲ ತೋಟದ ಗುಲಾಬಿ ಹೂಗಳು ವಿದೇಶಕ್ಕೆ..


 ಪ್ರೇಮಿಗಳ ದಿನಾಚರಣೆಯ ದಿನ ಗುಲಾಬಿ ಹೂ ಕೊಟ್ಟು ಪ್ರೇಮ ನಿವೇದನೆ ಮಾಡಿಕೊಳ್ಳುವಾಗ ಶಿವಸೇನೆ, ಭಜರಂಗದಳದ ಕಾರ್ಯಕರ್ತರು ಎಲ್ಲಿ ಹಿಂಬಾಲಿಸಿ ತಾಳಿ ಕಟ್ಟಿಸಿ ಬಿಡುತ್ತಾರೋ ಎಂಬ ಹೊಸ ಭಯದ ನಡುವೆಯೂ ಗುಲಾಬಿ ಹೂಗಳಿಗೆ ಬೇಡಿಕೆ ಕಡಿಮೆಯಾಗಿಲ್ಲ. ಅದರಲ್ಲೂ ಕೆಂಪು ಗುಲಾಬಿಗೆ ಜಗತ್ತಿನೆಲ್ಲೆಡೆಯೂ  ಪ್ರೇಮಿಗಳ ದಿನಾಚರಣೆಯ ಫೆಬ್ರುವರಿ 14 ರಂದು ವಿಪರೀತ ಡಿಮ್ಯಾಂಡ್.


ಬಳ್ಳಾರಿ ಜಿಲ್ಲೆ ಹಗರಿಬೊಮ್ಮನಹಳ್ಳಿ ತಾಲೂಕಿನ ಲೋಕಪ್ಪನಹೊಲ ಗ್ರಾಮದ ಬಳಿ ಇರುವ ಕಾಂಗ್ರೆಸ್ ನ ರಾಜ್ಯ ಸಭಾ ಸದಸ್ಯ ಅನಿಲ್ ಲಾಡ್ ಒಡೆತನದ ವಿ.ಎಸ್.ಎಲ್.ಅಗ್ರೊ ಟೆಕ್ ಗುಲಾಬಿ ತೋಟದಲ್ಲಿ ಪ್ರೇಮಿಗಳ ದಿನಾಚರಣೆಗೆಂದೇ ವಿಶೇಷವಾಗಿ ಕೆಂಗುಲಾಬಿಯನ್ನು ಬೆಳೆದು ರಫ್ತು ಮಾಡಲಾಗುತ್ತಿದೆ.     ಬಳ್ಳಾರಿಯ ಮತ್ತೊಂದು ಮುಖವೇ ಬಿಸಿಲು. ಇಂತಹ ಬಿರು ಬಿಸಿಲು ನಾಡಿನ ಕೆಂಗುಲಾಬಿ ಪ್ರೀತಿಸುವ ಹೃದಯಗಳ ನವಿರಾದ ಮಧುರ ಭಾವನೆಗಳನ್ನು ಹಂಚಿಕೊಳ್ಳಲು ಸಹಕಾರಿಯಾಗುತ್ತಿದೆ. ಲೋಕಪ್ಪನ ಹೊಲದ ಬಳಿ 26 ಎಕರೆ ಪ್ರದೇಶದಲ್ಲಿ ಗುಲಾಬಿ ಬೆಳೆಯುತ್ತಿದ್ದು 800ಕ್ಕೂ ಹೆಚ್ಚು ಮಹಿಳೆಯರು ಹಾಗೂ ಪುರುಷರು ಇಲ್ಲಿ ಕೆಲಸ ಮಾಡುತ್ತಿದ್ದಾರೆ. ಅತ್ಯಾಧುನಿಕ ತಂತ್ರಜ್ಷಾನದಿಂದ ನಿರ್ಮಿಸಲಾಗಿರುವ 26 ಗ್ರೀನ್ ಹೌಸ್ ಗಳಲ್ಲಿ ವಿಶಿಷ್ಟವಾಗಿ ಗುಲಾಬಿಯನ್ನು ಬೆಳೆಯಲಾಗುತ್ತಿದೆ. ಹಬ್ಬ ಹರಿದಿನ, ದಿನಾಚರಣೆಗಳ ಸಂದರ್ಭಕ್ಕೆ ಒದಗುವಂತೆ ಬೆಳೆ ಪದ್ಧತಿ ಅನುಸರಿಸಲಾಗುತ್ತಿದೆ.

ವ್ಯಾಲೈಂಟನ ಡೇ ಗೆ ದೇಶದ ವಿವಿಧ ನಗರಗಳಿಂದ ಹಾಗೂ ವಿವಿಧ ದೇಶಗಳಿಂದ ಮೊದಲೇ ಬೇಡಿಕೆ ಸಲ್ಲಿಸಿರುತ್ತಾರೆ. ಈ ಗುಲಾಬಿ ತೋಟದಲ್ಲಿ ಬಹು ವೈವಿಧ್ಯ ಬಣ್ಣಗಳ ಪಿಂಕ್, ಬೈಕಲರ್, ಆರೇಂಜ್, ಬಿಳಿ, ಕೆಂಪು, ಹಳದಿ ಹೂಗಳನ್ನು ಸೇರಿದಂತೆ ಹದಿನೈದಕ್ಕೂ ಹೆಚ್ಚು ಬಣ್ಣದ ಹೂಗಳನ್ನು ಕಾಣಬಹುದಾಗಿದೆ."ಪ್ರೇಮಿಗಳ ದಿನಾಚರಣೆಗೆ ಕೆಂಗುಲಾಬಿಯೇ ಶ್ರೇಷ್ಠ" ಎಂದು ಯುವಜನತೆ ಆಸಕ್ತಿ ಪಡುತ್ತಿದ್ದು ಈ ಬಾರಿ 8 ಲಕ್ಷ ಹೂಗಳನ್ನು ವಿದೇಶಗಳಾದ ಆಸ್ಠ್ರೇಲಿಯಾ, ಜಪಾನ್, ಹಾಲೆಂಡ್, ನ್ಯೂಜಿಲೆಂಡ್, ಯುನೈಟೆಡ್ ಕಿಂಗಡಮ್ ಸೇರಿದಂತೆ ಭಾರತದ ಬೆಂಗಳೂರು, ದೆಹಲಿ ಮುಂಬೈ, ಹೈದರಾಬಾದ್, ಗೋವಾ, ವಿಜಯವಾಡ ನಗರಗಳಿಗೆ ರಫ್ತು ಮಾಡಲಾಗಿದೆ ಎನ್ನುತ್ತಾರೆ ವಿ.ಎಸ್. ಎಲ್. ಅಗ್ರೊ ಟೆಕ್ ನ ಉಸ್ತುವಾರಿ ಹೊತ್ತಿರುವ ವಿ.ಶ್ರೀನಿವಾಸ.


ಅತ್ತ್ಯುತ್ತಮ ಗುಣಮಟ್ಟದ ಉತ್ಪಾದನೆಗೆ ದೆಹಲಿಯಲ್ಲಿ ನಡೆದ ಇಂಟರನ್ಯಾಷನಲ್ ಫ್ಲೋರಾ ಎಕ್ಸ್ ಫೋ ನಲ್ಲಿ ಕೃಷಿ ಪಿತಾಮಹ ಸ್ವಾಮಿನಾಥನ್ ಅವರಿಂದ ಅಗ್ರೊಟೆಕ್ ಪ್ರಶಸ್ತಿ ಪಡೆದುಕೊಂಡಿದೆ. ಬಿರು ಬಿಸಿಲಿನ ನಡುವೆ ಬೆಳೆದ ಈ ಗುಲಾಬಿ ಪ್ರೇಮಿಗಳ ಎದೆಯಲ್ಲಿ ಪ್ರೀತಿಯ ಕಂಪು ಮೂಡಿಸಲಿ. ಪ್ರೀತಿಸುವವರ ಹೃದಯದಲ್ಲಿ ಮಾನವೀಯತೆಯ ಪರಿಮಳ ಹರಡಿಸಲಿ  ಎಂದು ಆಶಿಸೋಣವೇ......? 
ಇದರ ಮಾಹಿತಿ ಬಗ್ಗೆ ತಿಳಿದುಕೊಳ್ಳಲು ವಿ. ಶ್ರೀನಿವಾಸ್ - 9945679912- 08394- 244777

ಪತ್ರೇಶ್ ಹಿರೇಮಠ್  ಹಗರಿಬೊಮ್ಮನಹಳ್ಳಿ

ಯಾರವಳು....?

   ಮೊನ್ನೆ ಅವಳು ಸಿಕ್ಕಾಗ                                 
   ಹೇಳಬೇಕೆನಿಸಿತು...?

    ನಾಲಿಗೆ ಶಬ್ದಗಳನ್ನೇ ಹೊರಡಿಸಲಿಲ್ಲ
    ಹೇಳಬೇಕಾದ್ದನ್ನ
    ಹೇಳಬಾರದ್ದನ್ನ
  ಕಪ್ಪೆಯ ವಟಗುಟ್ಟುವಿಕೆಯಂತೆ ಬಚ್ಚಿಡಲಾಗಲಿಲ್ಲ ...?

  ಅವಳ ಕಪ್ಪುಬಣ್ಣದ ಆಕರ್ಷಣೆಯನ್ನು
  ಮನಸೆಳೆಯುವ ಕಣ್ಣೋಟದ ಬಗ್ಗೆ
  ಕೇಳಲೇ ಬೇಕೆನಿಸುವ ಮಧುರ ಧ್ವನಿಯಬಗ್ಗೆ ಹೇಳಲಾಗಲಿಲ್ಲ ?
                      
  ದೂರದಿಂದಲೇ ಗುರುತಿಸುವ ನಡಿಗೆಯನ್ನ
  ಮಲಗಿದಾಗ ನನ್ನೆದೆಯಲ್ಲಿ ಕೇಳುವ ಗೆಜ್ಜೆ ಸಪ್ಪಳವನ್ನ

  ಕನಸಿನಲ್ಲಿ ಕಾಡುವ ಆ ಮುಖ ನಿನ್ನದೇ ಎಂದು ಹೇಳಲಾಗಲಿಲ್ಲ ?
        

  ಈಗ ಧೈರ್ಯವಿದೆ
  ನಾಲಿಗೆ ಶಬ್ದಗಳನ್ನು ಹೊರಡಿಸುತ್ತಿದೆ
  ಕನಸಿನಲ್ಲಿ ಕಾಣುವ ಹುಡುಗಿ ನನ್ನೆದುರಿಗಿದ್ದಾಳೆ
  ಜೊತೆಗೊಬ್ಬ ಸಂಗಾತಿ ಮಂಜುಮಂಜಾಗಿ ಕಾಣುತ್ತಿದ್ದಾನೆ

     ನನ್ನಲ್ಲೀಗ ಎಲ್ಲವೂ ಇದೆ
     ಬತ್ತಿದ ಪ್ರೀತಿ
     ಮಂಜುಮಂಜಾದ ಕನಸು
     ಅಸ್ಪಷ್ಟವಾಗಿ ಕೇಳುವ ಕಿವಿ
     ಆಗಲೋ ಈಗಲೋ ಎದೆಯಲ್ಲಿ ಗೆಜ್ಜೆ ಸಪ್ಪಳ
     ಯಾರದೋ ಎಂಬ ಗೊಂದಲ
     ಯಾರದಿರಬಹುದು.......... ?




                             ಪತ್ರೇಶ್ ಹಿರೇಮಠ

ಶಿಕ್ಷಕರೇ ನೀವು ಹಳ್ಳಿ ಮೇಷ್ಟ್ರಾಗಿ ........


ಹಳ್ಳಿ ಮೇಷ್ಟ್ರು ಎಂದಾಕ್ಷಣ ಖ್ಯಾತ ನಟ ರವಿಚಂದ್ರನ್ ಚಲನಚಿತ್ರ ಕಥೆಯೆಂದು ಭಾವಿಸಿದರೆ ತಪ್ಪಾದೀತು. ಇದು ನಮ್ಮ  ಇಡೀ ಊರಿಗೆ ಊರೇ ಬಾಗಿ ಗೌರವಿಸುತ್ತಿದ್ದ ಹಳೆಯ ಮೇಷ್ಟ್ರುಗಳ ವಿಷಯವಿದು. ಶಿಕ್ಷಕರಿಗೆ ದೇಗುಲ ನಿರ್ಮಿಸಿದ ನಾಡ ವಿದ್ಯಾವಂತರು ಮತ್ತೆ ಮತ್ತೆ ನೆನಪಿಸಿಕೊಳ್ಳಬೇಕಾದ ಹಳ್ಳಿಯ ಹಳೆಯ ಮೇಷ್ಟ್ರುಗಳ ಬದುಕಿನ ಕಥಾ ಸರಮಾಲೆಯಿದು
ಈಗ ಶಿಕ್ಷಕ ವೃತ್ತಿಯೆಂದರೆ ಬೆಳಿಗ್ಗೆ ಹತ್ತಕ್ಕೆ ಶಾಲೆಗೆಹೊರಡುವುದು, ಪ್ರಾರ್ಥನೆ , ಪಾಠ ಮಾಡುವುದು ಪುನಃ ಸಂಜೆ ಐದಕ್ಕೆ ಮನೆಗೆ ಮರಳುವುದು.ಇದು ಇಂದಿನ ಬಹುತೇಕ ಶಿಕ್ಷಕರ ದಿನಚರಿ. ಈಗಿನ ಯಾವ ಶಿಕ್ಷಕರು ತಾವು ಸೇವೆ ಸಲ್ಲಿಸುವ ಹಳ್ಳಿಗಳಲ್ಲಿ ಮನೆ ಮಾಡಿಕೊಂಡು ಇರುವುದಿಲ್ಲ. ವಿವಾಹಿತ ಶಿಕ್ಷಕರಿಗೆ ಸಂಸಾರ, ಮಕ್ಕಳ ಉನ್ನತ ಶಿಕ್ಷಣದ ಕಾರಣಕ್ಕಾಗಿ ನಗರ ಪ್ರದೇಶಗಳಲ್ಲಿ ವಾಸಿಸುವುದು ಅನಿವಾರ್ಯ. ಅವಿವಾಹಿತ ಶಿಕ್ಷಕರು ಕೂಡಾ ಹಳ್ಳಿಗಳಲ್ಲಿ ವಾಸಿಸುವುದಿಲ್ಲ. ಶಿಕ್ಷಕಿಯರಿಗೆ ವಾಸಿಸಲು ಅನಾನುಕೂಲ  ಇರುವ ಕಾರಣ ಅವರನ್ನು ಇಲ್ಲಿ ಪ್ರಸ್ತಾಪಿಸುವುದು ಅನವಶ್ಯಕ.
ದಶಕಗಳ ಹಿಂದೆ ಹೆಚ್ಚಿನ ಶಿಕ್ಷಕರು ಹಳ್ಳಿಗಳಲ್ಲಿ ವಾಸಿಸುವ ಮೂಲಕ ಜನರ ಪ್ರೀತಿ, ವಿಶ್ವಾಸ,ನಂಬಿಕೆ ಗಳಿಸುವಲ್ಲಿ ಯಶಸ್ವಿಯಾಗಿದ್ದರು. ಇಡೀ ಹಳ್ಳಿ ಜನರ ಪ್ರೀತಿ ಪಾತ್ರ ಶಿಕ್ಷಕರಾಗಲು ಅವರ ಶ್ರಮ ಶ್ಲಾಘನೀಯ. ಆಗ ಹಳ್ಳಿಗಳಲ್ಲಿ ಉಳಿದುಕೊಳ್ಳುವ ಶಿಕ್ಷಕರು ಸಂಜೆ ಮನೆಪಾಠ ಹೇಳುತ್ತಿದ್ದರು. ಅವಿದ್ಯಾವಂತ ಜನತೆಯ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದರು.ಬಡ ಪ್ರತಿಭಾನ್ವಿತ ಮಕ್ಕಳಿಗೆ ಅತಿ ಕಡಿಮೆ ಸಂಬಳದ ತಮ್ಮ ಕಷ್ಡದ ದಿನಗಳ ನಡುವೆಯೂ ಪುಸ್ತಕ, ಬಟ್ಟೆಗಳ ನೆರವು ನೀಡುತ್ತಿದ್ದರು. ಸರಕಾರಿ ಸೌಲಭ್ಯಗಳ ಮಾಹಿತಿ ನೀಡುವುದು, ಪತ್ರ ಬರೆದುಕೊಡುವುದು ಹೀಗೆ ಹಳ್ಳಿಯ ಬದುಕಿನ ನಡುವೆ ಅನಿವಾರ್ಯ ವ್ಯಕ್ತಿಗಳಾಗಿ ಹರಹೊಮ್ಮುತ್ತಿದ್ದರು. ಹಳ್ಳಿಯಲ್ಲಿ ವಾಸಿಸಿದ ಯಾವ ಶಿಕ್ಷಕರು ಹಾಲು, ಮೊಸರು, ಮಜ್ಜಿಗೆಯನ್ನು ಖರೀದಿಸಿದ್ದು ವಿರಳ. ಹೊಲದಲ್ಲಿ ಬೆಳೆದ ಧವಸ ದಾನ್ಯ,ತರಕಾರಿಗಳನ್ನು ಶಿಕ್ಷಕರ ಮನೆ ಬಾಗಿಲಿಗೆ ಹೋಗಿ ಕೊಡುತ್ತಿದ್ದರು. ಅವಿವಾಹಿತ ಶಿಕ್ಷಕರಾಗಿದ್ದರಂತೂ ಹಳ್ಳಿಗಳವರ ಮನೆಗಳಿಂದಲೇ ಊಟವೂ ತಲುಪತಿತ್ತು. ಶಿಕ್ಷಕರು ಬೆಳಿಗ್ಗೆ ಮತ್ತು ಸಂಜೆ ಊರ ಓಣಿಗಳಲ್ಲಿ ಹೊರಟರೆ ಆಟವಾಡುವ ಮಕ್ಕಳಿಂದ ಹಿಡಿದು ಅಂಗಳದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಶಿಕ್ಷಕರಿಗೆ ಗೌರವ ನೀಡಿ ಒಳ ಹೋಗುತ್ತಿದ್ದರು. ಹಳ್ಳಿಯಲ್ಲಿ ಯಾರ ಮನೆಯಲ್ಲಿ 
ಸಮಾರಂಭವಿರಲಿ, ಶುಭ ಕಾರ್ಯಕ್ರಮವಿರಲಿ ಹಳ್ಳಿಮೇಷ್ಟ್ರಿಗೆ ಮೊದಲ ಆಮಂತ್ರಣ. ಗಂಡು ಹೆಣ್ಣು ಬೀಗತನ, ಸಂಬಂಧ ಹೀಗೆ ಎಲ್ಲದರಲ್ಲೂ   ಮೇಷ್ಟ್ರು ಇರಲೇಬೇಕು. ಹಳ್ಳಿಗಳಲ್ಲಿನ ಪಂಚಾಯಿತಿ, ದೈವದ, ದೇವಸ್ಥಾನದ ಕಾರ್ಯಗಳು.ದೇವಸ್ತಾನದ ಲೆಕ್ಕಪತ್ರ ಎಲ್ಲದಕ್ಕೂ ಮೇಷ್ಟ್ರು ಅತ್ಯವಶ್ಯ.ಮೇಷ್ಟ್ರು ಹೇಳಿದ ಮೇಲೆ ಮುಗೀತು ಯಾವ ರಾಜಕಾರಿಣಿ ಪ್ರಭಾವಿ ವ್ಯಕ್ತಿಯ ಮಾತನ್ನೂ ಹಳ್ಳಗರು ಕೇಳುತ್ತಿರಲಿಲ್ಲ.
ಹಳ್ಳಿಗಳ ಶಕ್ತಿಯಾಗಿದ್ದರು,ಹಾಗೆ ಬದುಕಿದರು, ಹಾಗೆ ನಡೆದುಕೊಂಡರು. ಅವರೆಂದೂ ಹಳ್ಳಿ ರಾಜಕಾರಣದಲ್ಲಿ ಮೂಗು ತೂರಿಸುತ್ತಿರಲಿಲ್ಲ, ಬೇಧ ಭಾವ ಮಾಡಲಿಲ್ಲ. ಇದ್ದುದನ್ನೇ ಇದ್ದ ಹಾಗೆ ಹೇಳುವ ಶಕ್ತಿ ಯುಕ್ತಿ ಹಳ್ಳಿ ಮೇಷ್ಟ್ರಿಗೆ ಇತ್ತು.ಹಳ್ಳಿಗಳ ಅಭಿವೃದ್ಧಿಗೆ ಶ್ರಮಿಸುತ್ತಾ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಾ ಶ್ರೀಗಂಧದಂತೆ ಬದುಕನ್ನೇ ಸವೆಸಿ ಹಳ್ಳಿಗರಿಗೋಸ್ಕರ ಹೊಸ ಬದುಕಿನ ಸುವಾಸಿತ ಹಾದಿ ತೋರಿದ ಆ ಹಳ್ಳಿ ಮೇಷ್ಟ್ರು ಈಗೆಲ್ಲಿ..? ಈಗಿನ ಶಿಕ್ಷಕರಿಗೇಕೆ ಆ ಗೌರವದೆತ್ತರಕೇರಲು ಸಾಧ್ಯವಾಗುತ್ತಿಲ್ಲ..? 
        ಈಗಲೂ ಅಂತಹ ಅವಕಾಶಗಳು ಇವೆ. ಆದರೆ ತೊಡಕುಗಳಿವೆ. ಮಾಹಿತಿ ತಂತ್ರಜ್ಞಾನದ ನಾಗಾಲೋಟದ ಈ ಕಾಲದಲ್ಲಿ ಈಗಿನ ಕೆಲ ಶಿಕ್ಷಕರಿಗೆ ಹಳ್ಳಿಗಳಲ್ಲಿ ಉಳಿದುಕೊಳ್ಳುವ ತಾಳ್ಮೆಯಿಲ್ಲ. ಮೊಬೈಲ್ ಮತ್ತು ದ್ವಿಚಕ್ರ ವಾಹನ ಶಾಲೆ ಮುಗಿದ ಕೂಡಲೇ ನಗರ ಪ್ರದೇಶದೆಡೆ ಸೆಳೆಯುತ್ತವೆ.
ಇತ್ತೀಚೆಗೆ ನೇಮಕಗೊಂಡ ಶಿಕ್ಷಕರಿಗೆ ಆಕರ್ಷಕ ಸಂಬಳ, ಕಂತುಗಳ ಆಧಾರದ ಮೇಲೆ ಸಿಗುವ ಬೈಕು, ಮೊಬೈಲ್ ಜೊತೆಗೆ ಮೆಸ್ಸೇಜ್ ಹೀಗೆ ಆಧುನಿಕ ತಂತ್ರಜ್ಞಾನದ ಮೋಹ ಶಿಕ್ಷಕ ವೃತ್ತಿಯ ಗಾಂಭೀರ್ಯತೆಯನ್ನು ಹಾಳು ಮಾಡುತ್ತಿದೆ.ಶಾಲೆಗಳಲ್ಲಿ ಎಸ್ಡಿಎಂಸಿ  ರಾಜಕಾರಣ ಶಾಲೆಗಳ ಅಭಿವೃದ್ಧಿಗೆ ಮಾರಕವಾಗುತ್ತಿದೆ. ಹಿಂದೆ ಮಕ್ಕಳಿಗೆ ಶಿಕ್ಷೆ ನೀಡಿದಾಗ ಪಾಲಕರು ಹೊಡೆದು ಬುಧ್ಧಿ ಕಲಿಸಿ ಎನ್ನುತ್ತಿದ್ದರು. ಆದರೀಗ ಮಕ್ಕಳಿಗೆ ಶಿಕ್ಷೆ ನೀಡಿದರೆ ಪಾಲಕರಿಂದಾಗುವ ಕಿರಿಕಿರಿ ಅಸಹನೀಯ. ಹಾಗಾಗಿ ಕೆಲ ಶಿಕ್ಷಕರು ಏನು ಮಾಡಿದರೂ ಕಷ್ಟ, ಹೊಡಿಯೋದು ಬೇಡ ಸುಮ್ಮನೆ ನಮಗೆ ಎಷ್ಟಾಗುತ್ತೋ ಅಷ್ಟು ಕಲಿಸೋಣ ನಮ್ಮ ಸಂಬಳ ಅಂತೂ ಬರುತ್ತಲ್ಲ ಎನ್ನುವ ಆಲೋಚನೆಯ ಮೊರೆ ಹೋಗಿದ್ದಾರೆ. ಇನ್ನು ಕೆಲವರಂತೂ ಪಾಲಕರ ಕಿರಿಕಿರಿ ನಡುವೆಯೂ ಪಾಲಕರಿಂದ ಬೈಸಿಕೊಂಡೂ ಕಲಿಸುವ ಸಾಹಸ ಮಾಡುತ್ತಿದ್ದಾರೆ.ಇನ್ನು ಕೆಲ ಶಿಕ್ಷಕರು ತಾವಾಯಿತು ತಮ್ಮ ಮೊಬೈಲ್ ಕರೆ ಇಲ್ಲವೇ ಮೆಸೆಜ್ ಗಳಲ್ಲಿ ಮಗ್ನರಾಗಿರುತ್ತಾರೆ. ಅನೇಕ ಶಾಲೆಗಳಲ್ಲಿ ಇತ್ತೀಚೆಗೆ ನೇಮಕಗೊಂಡ ಚಿಕ್ಕ ವಯಸ್ಸಿನ ಕೆಲ ಯುವ ಶಿಕ್ಷಕರಿಗೆ ಶಾಲೆಗಳಲ್ಲಿ ಮೊಬೈಲ್ ನಿಷೇಧ ಶಿಕ್ಷಣ ಇಲಾಖಾ ಸು(ಸ)ತ್ತೋಲೆಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ.
ಭವಿಷ್ಯದ ಪ್ರಜೆಗಳನ್ನು ಸೃಷ್ಟಿಸುವ ಮಹಾತ್ಕಾರ್ಯದ ಯಜ್ಞಾಧಿಪತಿಗಳು ಶಿಕ್ಷಕರು. ಶಿಕ್ಷಕ ಮತ್ತು ಶಿಕ್ಷಣ ಒಬ್ಬ ವ್ಯಕ್ತಿಯ ಜೀವನದಲ್ಲಿ ಬಂದು ಹೋಗುವ ಪಾತ್ರ ಮತ್ತು ಪ್ರಕ್ರಿಯೆ. ವ್ಯಕ್ತಿ ವಿಕಸನ ಪ್ರಕ್ರಿಯೆಯಲ್ಲಿ ಇವೆರಡೂ ಪ್ರಮುಖ ಅಂಶಗಳು. ಅದು ಇಂದಿನ ಶಿಕ್ಷಕ ವೃತ್ತಿಯಲ್ಲಿ ಸೇವೆ ಸಲ್ಲಿಸುವವರು ಪ್ರಮುಖವಾಗಿ ತಿಳಿಯಬೇಕಾದ ತಿರುಳು.
ಈಗಲೂ ಸಮಯವೇನೂ ಮೀರಿಲ್ಲ ವಶೀಲಿ ಬಾಜಿ, ರಾಜಕಾರಿಣಿ, ಪುಢಾರಿಗಳ ಕಾಲು ಹಿಡಿದು ಉತ್ತಮ ಶಿಕ್ಷಕ ಪ್ರಶಸ್ತಿ ಗಳಿಸುವುದಕ್ಕಿಂತ ನೀವು ಸೇವೆ ಸಲ್ಲಿಸುವ ಹಳ್ಳಿಗರ ಮನ ಗೆಲ್ಲಿರಿ. ಹಳ್ಳಿ ಮಕ್ಕಳನ್ನು ನಗರ ಪ್ರದೇಶದ ಮಕ್ಕಳೊಂದಿಗೆ ಸ್ಪರ್ದಿಸುವ ರೀತಿಯಲ್ಲಿ ಅಣಿಗೊಳಿಸಿರಿ. ಹಳ್ಳಿಗಳ ಅಭಿವೃದ್ಧಿ ನಿಮ್ಮ ಮೂಲ ಮಂತ್ರವಾಗಲಿ, ಹಳ್ಳಿಯಲ್ಲಿರಿ, ರಾತ್ರಿ ಮಕ್ಕಳಿಗೆ ಮನೆಪಾಠ ಹೇಳಿ ನೋಡಿ ನಿಮ್ಮ ಬಗ್ಗೆ ಹಳ್ಳಿಗರಿಗೆ ಯಾವ ಭಾವನೆ ಮೂಡುತ್ತದೋ ನೀವೇ ಕಾದು ನೋಡಿ. ನಿಮ್ಮ ಶ್ರಮ ಎಂದಿದ್ದರೂ ನಿಮಗೆ ಫಲ ನೀಡುತ್ತದೆ.
ಮೊಬೈಲ್ ಬಳಕೆ ಅಗತ್ಯಕ್ಕೆ ತಕ್ಕಂತೆ ಇರಲಿ, ಹೊಸ ಹೊಸ ಪುಸ್ತಕಗಳ ಅಧ್ಯಯನಗಳ ಮೂಲಕ ಪಠ್ಯಗಳ ಜೊತೆ ಮಕ್ಕಳಿಗೆ ಹೊಸದೇನನ್ನೋ ತಿಳಿಸುತ್ತಾ ಮಕ್ಕಳಿಗೆ ನೀವು ಬೆರಗು ಮೂಡಿಸುವ ಶಿಕ್ಷಕರಾಗಿ. ಬಿ.ಇಡಿ, ಡಿ ಇಡಿ, ಎಂಎ, ಎಂಇಡಿ ನಿಮ್ಮ ಶಿಕ್ಷಣದ ಅಂತ್ಯವಲ್ಲ. ನೀವು ಕಲಿತದ್ದು ಕೈಯಗಲ ಕಲಿಯುವುದು ಕಡಲಗಲ. ನಿಮ್ಮಲ್ಲಿನ ಜ್ಞಾನ ಮತ್ತು ತಾಳ್ಮೆ ನಿಮ್ಮನ್ನು ಉನ್ನತಿಯತ್ತ ಒಯ್ಯತ್ತದೆ.ಮಕ್ಕಳಿಗೆ ಕಲಿಸಿದಷ್ಟು ನಿಮ್ಮನ್ನು ಪ್ರೀತಿಸುತ್ತಾರೆ. ಪಠ್ಯ ಭೋಧನೆಯಷ್ಟೆ ಶಿಕ್ಷಣವಲ್ಲ ಹೊಸ ಪುಸ್ತಕ, ಆವಿಷ್ಕಾರ, ನೃತ್ಯ, ನಾಟಕ, ಸಂಗೀತ, ಸಾಂಸ್ಕೃತಿಕ ಕಾರ್ಯಕ್ರಮಗಳ ಜ್ಞಾನ ನೀಡುವುದರಿಂದ ಮಕ್ಕಳನ್ನು ಮುಖ್ಯವಾಹಿನಿಗೆ ತರುವ ಕೆಲಸ ಮಾಡಬಹುದಾಗಿದೆ.
 ಜಗತ್ತಿನಲ್ಲಿ ನಿಮಗೆ ಸಿಕ್ಕ ಅತ್ಯಮೂಲ್ಯ ಜವಾಬ್ದಾರಿಯಿದು. ನಿಮ್ಮ ಶಿಕ್ಷಕ ವೃತ್ತಿಯ ಯಶಸ್ವಿ ಪಾಲಕರ ಮತ್ತು ಮಕ್ಕಳ ಮನಸ್ಸನ್ನು ಗೆದ್ದಾಗ ಮಾತ್ರ ಸಿಗುತ್ತದೆ. ನೀವು ಗಳಿಸಿದ ಹಣದಿಂದಲ್ಲ, ಪುಢಾರಿಗಳ ಕಾಲು ಹಿಡಿದು ವಶೀಲಿ ಮಾಡಿ ಕಿತ್ತು ತಂದ ಪ್ರಶಸ್ತಿಯಿಂದಲ್ಲ..... ಅಲ್ಲವೇ....?
          ಪತ್ರೇಶ್ ಹಿರೇಮಠ್
(ವಿಜಯ ಕರ್ನಾಟಕದ ಲವ್ ಲವಿಕೆಯಲ್ಲಿ ಪ್ರಕಟವಾದ ಲೇಖನ)