06 ಮಾರ್ಚ್, 2014

ಪ್ರವರ ಕೊಟ್ಟೂರು ಬರೆದ ಕವನ


೧.
ಯಾವತ್ತೂ ಹೃದಯ ಬಟ್ಟಲು
ತುಂಬಬಾರದು,
ಏಕೆಂದರೆ
ಖಾಲಿಯಾಗುವುದು ತುಸು ಕಷ್ಟ

೨.
ಎದೆಯೊಳಗೆ 
ಒಂದೋ ಒಲವಿರಬೇಕು
ಇಲ್ಲಾ ವಿಷವಿರಬೇಕು
ಎರಡೂ ಒಟ್ಟಿಗೆ ಇದ್ದಲ್ಲಿ
ಸತ್ತಂತೆ ಬದುಕಬೇಕಾದೀತು

೩.
ಅಳಕ್ಕಿಳಿದ ನಂತರ
ಮೌನ ತಾನಾಗೆ ಆವರಿಸುತ್ತದೆ,
ಈ ನಿಯಮ
ಎಲ್ಲಕ್ಕೂ ಅನ್ವಯಿಸುತ್ತದೆ

೪.
ಕಾಮದಲ್ಲಿ ಸೋತವರು
ಮತ್ತು
ಪ್ರೇಮದಲ್ಲಿ ಗೆದ್ದವರು
ಮಹಾ ಮೂರ್ಖರು


ಶೂನ್ಯದಲ್ಲಿ ನಿಂತು
ಮೌನವನ್ನೂ ಕತ್ತಲನ್ನೂ
ತೂಗಿದೆ
ಎರಡೂ ಹಗುರ ಎನ್ನಿಸಿದವು

೬.
ಶವದ ಪೆಟ್ಟಿಗೆ ಒಯ್ಯುವ
ದಾರಿಯಲ್ಲಿ
ಹೂವುಗಳು ನಗುವ ಹಾಗಿಲ್ಲವೆಂದರೆ
ನಿಮಿಷದ ಮಟ್ಟಿಗಾದರೂ ಎದೆ ಬಡಿತ
ತಡೆಹಿಡಿಯಿರಿ
                        -ಪ್ರವರ ಕೊಟ್ಟೂರು