25 ಜೂನ್, 2011

ಹೊಸದಾಗಿ ಮದುವೆಯಾದವರು ಕಾರ ಹುಣ್ಣಿಮೆ ದಿನ ಕರಿ ಹರಿಯುವಾಗ ಹೊರಗೆ ಯಾಕೆ ಹೋಗಬಾರದು...?

ಕಾರಹುಣ್ಣಿಮೆ ದಿನ ಎತ್ತುಗಳನ್ನು ಕರಿ ಹರಿಯುವಾಗ ಹೊಸದಾಗಿ ಮದುವೆಯಾದೆವರು ಹೊರಗಡೆ ಹೋಗಬಾರದು ಎಂಬ ಪ್ರತೀತಿ ಈಗಲೂ ಹಳ್ಳಿಗಳಲ್ಲಿ ಇದೆ. ಇಂದಿಗೂ ಹಳ್ಳಿಗಳಲ್ಲಿ ಹೊಸ ಮದುಮಗನನ್ನು ಹೊರಗೆ ಬಿಡುವುದಿಲ್ಲ. ಇತ್ತೀಚಿನ ಕೆಲವರು ಇದನ್ನು ಮೂಢನಂಬಿಕೆ ಎಂದು ಮೂಗು ಮುರಿಯುತ್ತಾರೆ.
 ಆದರೆ ಹಿಂದಿನವರು ಇಂತಹ ಪ್ರತೀತಿಗಳನ್ನು ಸುಮ್ಮನೆ ಮಾಡಿರುವುದಿಲ್ಲ.  ನಮ್ಮ ಹಿಂದಿನ ಹಿರಿಯರ ಪಧ್ಧತಿ, ಪ್ರತೀತಿ, ನಂಬಿಕೆಗಳನ್ನು ಇವತ್ತಿನ ಪೀಳಿಗೆಯ ನಾವುಗಳು ಮೂಢನಂಬಿಕೆ ಎಂದು ಮೂದಲಿಸುತ್ತೇವೆ. ಆದರೆ ಹಿರಿಯರು ಮಾಡಿದ ಈ ನಂಬಿಕೆ ಅಂದಿನ ಕಾಲಕ್ಕೆ ಸತ್ಯವೂ ಆಗಿದೆ ಇಂದಿಗೂ ಹಳ್ಳಿಗಳಲ್ಲಿ ಕೃಷಿ ಅವಲಂಬಿತ ಯುವಕರಿಗೂ ಅನ್ವಯಿಸುತ್ತದೆ. ಹಿಂದೆ ನಗರ ಪ್ರದೇಶಗಳಲ್ಲಿ ನೌಕರಿ ಮಾಡುವ ಯುವಕರ ಸಂಖ್ಯೆ ಕಡಿಮೆ ಇತ್ತು. ಜೊತೆಗೆ ಬಹಳಷ್ಟು ಹಳ್ಳಿಗಳ ಯುವಕರು ಬೇಸಾಯದ ಮೇಲೆಯೇ ಜೀವನ ಸಾಗಿಸುತ್ತಿದ್ದರು. ಕೃಷಿಯ ಮೂಲವಾದ ಎತ್ತುಗಳನ್ನು ಯುವಕರು ಅತ್ಯಂತ ಪ್ರೀತಿಯಿಂದ ಸಾಕುತ್ತಾರೆ.
ಅವರಿಗೆ ತಮ್ಮ ಎತ್ತುಗಳು ಕಾರ ಹುಣ್ಣಿಮೆಯಲ್ಲಿ ಕರಿ ಹರಿಯುವಾಗ ಮೊದಲ ಸ್ಥಾನದಲ್ಲಿ ಬರಬೇಕು ಎಂಬ ಆಸೆ ಇರುತ್ತದೆ. ಆದರೆ ಎತ್ತುಗಳು ಓಡಿ ಗೆಲ್ಲಲು ಸಾಕಿ ಜೋಪಾನ ಮಾಡಿದ ಯುವಕನೂ ಎತ್ತುಗಳ ಹಿಂದೆ ಓಡುತ್ತಾ ಹುರಿದುಂಬಿಸಬೇಕು. ಆಗ ಮಾತ್ರ ಎತ್ತುಗಳು ಗೆಲ್ಲಲು ಸಾಧ್ಯ. ಆದರೆ ಎತ್ತುಗಳ ಹಿಂದೆ ಓಡುವುದು ಅಪಾಯಕಾರಿ ಕೆಲಸ, ಅಲ್ಲಿ ಆಪತ್ತು ಕಾದಿರುತ್ತದೆ. ಹಾಗಾಗಿ ಹೊಸದಾಗಿ ಮದುವೆಯಾದವರ ಪ್ರಾಣಕ್ಕೆ ತೊಂದರೆಯಾಗಲಿ ಅಥವಾ ಮೈ ಕೈಗೆ ಅನಾಹುತವಾಗದಿರಲಿ ಎಂಬರ್ಥದಲ್ಲಿ ಈ ನಂಬಿಕೆ ಪ್ರಚಲಿತದಲ್ಲಿದೆ. ಇದು ನನ್ನ ಯೋಚನಾಮಟ್ಟಕ್ಕೆ ಹೊಳೆದ ಸಂಗತಿ ... ಇದಕ್ಕೆ ನಿಮ್ಮ ಅಭಿಪ್ರಾಯವೇನು......?

1 ಕಾಮೆಂಟ್‌: