24 ಮೇ, 2011

ಪ್ರೀತಿ ಪ್ರೇಮ ಸಂಗಾತಿಗಳಲ್ಲಿ ವ್ಯಾಸಂಗಕ್ಕೆ ಸ್ಪರ್ಧೆ, ಚೈತನ್ಯ ಮೂಡಿಸಬೇಕಲ್ಲವೇ?- ಪತ್ರೇಶ್ ಹಿರೇಮಠರ ಲೇಖನ

ಪ್ರೀತಿ ಪ್ರೇಮ ಇವೆರಡೂ ಶಬ್ದಗಳು ಎಷ್ಟೋ ಯುವಕರನ್ನು ಉತ್ಸಾಹದ ಚಿಲುಮೆಯಲ್ಲಿ ನಲಿದಾಡಿಸುತ್ತವೆ. ಇವೆರಡೂ ಶಬ್ದಗಳನ್ನು ನಂಬಿ ಕೆಲವರು ಜೀವನವನ್ನು ಹಾಳು ಮಾಡಿಕೊಂಡಿದ್ದಾರೆ. ಪ್ರೀತಿಯ ಬಗ್ಗೆ ಯಾವ ವಿಜ್ಞಾನಿಯು ನಿಖರವಾಗಿ ಹೇಳಲಾರ. ಅದೊಂದು ಸುಪ್ತ ಅನುಭವ. ಅನುಭವಿಸಿದ ಪ್ರೇಮಾನುಭಾವಿಗಳಿಗೆ ಗೊತ್ತು. ಆದರೆ ವಿದ್ಯಾಭ್ಯಾಸ ಸಮಯದಲ್ಲಿ ಪ್ರೀತಿ ಎಷ್ಟು ಸೂಕ್ತ? ಎನ್ನುವ ಪ್ರಶ್ನೆ ಗಮನಾರ್ಹ.
               ಪ್ರೀತಿ ಹುಟ್ಟುವುದೇ ಆಕಸ್ಮಿಕ ಅದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ಆ ಪ್ರೀತಿಯನ್ನು ಸಂಯಮದಿಂದ ದೀರ್ಘಕಾಲ ಕಾಪಾಡಿಕೊಂಡು ನಮ್ಮ ಬದುಕನ್ನು ರೂಪಿಸಿಕೊಳ್ಳುವ ಕಲೆ ಎಲ್ಲಾ ಯುವಕ ಯುವತಿಯರಿಗೂ ಬರುವುದಿಲ್ಲ. ಪ್ರೀತಿ ಹುಣ್ಣಿಮೆ ಚಂದ್ರನಂತೆ ಯುವಕ ಯುವತಿಯರ ಮನಸ್ಸನ್ನು ಹೊಕ್ಕು ನವಿರಾದ ಮಧುರ ಭಾವನೆಗಳನ್ನು ಹರಿಸಿ, ಕನಸಿನ ಲೋಕದಲ್ಲಿ ವಿಹರಿಸಿ, ಉನ್ಮಾದದಲ್ಲಿ ತೇಲಾಡಿಸಿ ಕೊನೆಗೆ ಅಮವಾಸ್ಯೆಯ ಕಗ್ಗತ್ತಲ ರೂಪದಲ್ಲಿ ಪ್ರೇಮಿಗಳನ್ನು , ಅವರ ಕುಟುಂಬದವರನ್ನು ಕಾಡತೊಡಗುತ್ತದೆ.ಬೇರ್ಪಟ್ಟ ಭಗ್ನ ಪ್ರೇಮಿಗಳು ಪ್ರೀತಿಗಾಗಿ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.


     ತಂದೆ ತಾಯಿ ಮಕ್ಕಳ ಭವಿತವ್ಯದ ಬಗೆಗೆ ಅಪಾರ ಕನಸಿಟ್ಟು ಓದಲು ಕಳಿಸುತ್ತಾರೆ. ಓದುವ ಸಮಯದಲ್ಲಿ ಪ್ರೀತಿಯ ಹೆಸರಲ್ಲಿ ಸಮಯ ವ್ಯರ್ಥಗೊಳಿಸಿ ಜೀವನ ಹಾಳು ಮಾಡಿಕೊಳ್ಳುವ ಬದಲು ಚೆನ್ನಾಗಿ ಓದಿ, ಬದುಕಿಗೆ ಆರ್ಥಿಕ ಭದ್ರತೆಯನ್ನು ಕಲ್ಪಿಸಿಕೊಂಡು ಮನಸ್ಸಿಗೆ ಇಷ್ಟವಾದ,
ನಿಮ್ಮ ಹವ್ಯಾಸ ಭಾವನೆಗಳಿಗೆ ಹೊಂದಿಕೊಳ್ಳುವ ಸಂಗಾತಿಯನ್ನು ಆಯ್ಕೆ ಮಾಡಿಕೊಂಡರೆ ಸ್ವರ್ಗವನ್ನೇ ಧರೆಗಿಳಿಸಬಹುದು. ತಂದೆ ತಾಯಿ ಮಕ್ಕಳ ಮುಂದಿನ ಭವಿಷ್ಯ ಚೆನ್ನಾಗಿರಲಿ ಎಂಬ ದೂರಾಲೋಚನೆಯಿಂದ ನಮ್ಮ ಹಿತಕ್ಕಾಗಿಯೇ ಯೋಚಿಸುತ್ತಿದ್ದಾರೆಂಬುದನ್ನು ಮರೆಯದಿರಿ. ನಿಮ್ಮ ಆಯ್ಕೆ ನಿಮ್ಮ ತಂದೆ ತಾಯಿಗಳಿಗೂ ಒಪ್ಪಿಗೆಯಾದರೆ ಜಗತ್ತಿನಲ್ಲಿ ನಿಮ್ಮಂತ ಅದೃಷ್ಟಶಾಲಿಗಳು ಯಾರೂ ಇಲ್ಲವೆಂದು ತಿಳಿಯಿರಿ........ ಪ್ರೀತಿಯ ಮಾಯೆ ಮೈಮನಗಳ ಹೊಕ್ಕರೆ ಯಾರ ಹಿತನುಡಿಯು ಪ್ರೀತಿ ಎಂಬ ಪ್ರೇತ ಹೊಕ್ಕ ಪ್ರೇಮಿಗಳ ದಪ್ಪ ಚರ್ಮವನ್ನು ತಲುಪಲಾರದು. 

ಪ್ರೀತಿಯೆಂದರೆ ಬದುಕನ್ನು ಸುಂದರವಾಗಿ ರೂಪಿಸಿಕೊಳ್ಳುವುದು.ಪ್ರೀತಿ ಪ್ರೀತಿಸುವವರ ಬದುಕಿಗೆ ಪರಸ್ಪರ ಪೂರಕ ಹಾಗೂ ಚಾಲೆಂಜಿಂಗ್ ಆಗಿರಬೇಕು. ಪ್ರೀತಿ ಸಂಗಾತಿಗಳನ್ನು ಸ್ಪರ್ಧಾತ್ಮಕವಾಗಿ ಅಧ್ಯಯನ ಮಾಡಲು, ದುಡಿಯಲು ಪ್ರೇರೇಪಿಸುವಂತಿರಬೇಕು.
    ಪ್ರೀತಿಸಿ, ಪ್ರೀತಿಗೆ ಸಂಯಮವಿರಲಿ, ನಿಮ್ಮ ಬದುಕಿನೆಡೆಗೆ ಗುರಿಯಿರಲಿ, ಗುರಿ ತಲುಪಿದಾಗ ನಿಮ್ಮ ಆಲೋಚನಾ ಮಟ್ಟ ಬದಲಾಗಿರುತ್ತದೆ. ಆಗ ನಿಮ್ಮ ಕನಸುಗಳಿಗೆ ಬಣ್ಣ ಕೊಡಿರಿ. ಸಾರ್ಥಕ್ಯ ಆಯ್ಕೆ ನಿಮ್ಮದಾಗಿರುತ್ತದೆ. ಇಲ್ಲದಿದ್ದರೆ ಪ್ರೀತಿಯ ಮಾಯೆಯಲ್ಲಿ ಬಿದ್ದು ಮಾಡಿಕೊಂಡ ಆಯ್ಕೆಯ ಬಗ್ಗೆ ಜೀವನದ ಕೊನೆವರೆಗೂ ಪರಿತಪಿಸಬೇಕಾಗುತ್ತದೆ.
              ಒಂದು ವೇಳೆ ಪ್ರೀತಿಯ ಮಾತು ಕೇಳಿ ವಿದ್ಯಾಭ್ಯಾಸ ಕಡೆಗಣಿಸಿದ್ದೀರಾದರೆ ಅದು ನಿಮ್ಮ ತಪ್ಪಲ್ಲ , ವಯೋಸಹಜ ಮನೋಧರ್ಮ. ಕಾಲ ಮಿಂಚಿ ಹೋಗುವ ಮುನ್ನ ತಿದ್ದಿಕೊಳ್ಳಿ. ಸಂಗಾತಿಗಳಿಬ್ಬರೂ ಮೊದಲು ಓದಿನ ಕಡೆ ಗಮನ ಕೊಡಿ. ಜೀವನ ಅನುಭವಿಸಲು ಸಾಕಷ್ಟು ಸಮಯವಿದೆ. ಆದರೆ ಓದುವ ಸುವರ್ಣ ಯುಗ ಮುಂದೆ ಬೇಕೆಂದರೂ ಸಿಗದು.
               ಪ್ರೀತಿಯನ್ನು ಕೊಲ್ಲಿ ಎಂದೂ ಯಾರೂ ಹೇಳುವುದಿಲ್ಲ? ಆದರೆ ನಿಮ್ಮ ಪ್ರೀತಿ ನಿಮ್ಮಿಬ್ಬರನ್ನು ಸುಖವಾಗಿ ಬದುಕಿಸುತ್ತಾ ಅಂತಾ ತಂದೆ, ತಾಯಿ, ಅಣ್ಣ, ತಮ್ಮ, ಅಕ್ಕ, ತಂಗಿ ಹಾಗೂ ಸಮಾಜ ಕೇಳುತ್ತದೆ. ಸುಖವಾಗಿ ಬದುಕುವ ಹಾಗೂ ಬದುಕಿಸುವ ಸಾಮರ್ಥ್ಯ ನಿಮಗೆ ಬರಬೇಕಾದರೆ ಮೊದಲು ವ್ಯಾಸಂಗ ಮಾಡಿ ನಂತರ ನಿಮ್ಮ ಗುರಿ ತಲುಪಿ ಪ್ರೀತಿಯೆಂಬ ಮಾಯಾಂಗನೆಯನ್ನು ನಿಮ್ಮಿಷ್ಟದಂತೆ ಹುಡುಕಿಕೊಳ್ಳಿ....                   
                 ಈಗಲೂ ಎಷ್ಟೋ ಯುವಕ ಯುವತಿಯರು ತಮ್ಮ ಸಂಗಾತಿ ಚೆನ್ನಾಗಿ ಓದಲಿ, ನೌಕರಿಗೆ ಹೋಗಲಿ ಎಂದು ವಿದ್ಯಾಭ್ಯಾಸಕ್ಕೆ ಪ್ರೋತ್ಸಾಹ ನೀಡುತ್ತಾರೆ. ಇನ್ನು ಕೆಲವರು ಅವರ ಓದನ್ನು ಲೆಕ್ಕಿಸದೇ ಪ್ರೇಮ ವಿವಾಹವೆಂಬ ಬಲವಂತದ ಮಾಘ ಸ್ನಾನಕ್ಕೆ ನೂಕುತ್ತಾರೆ.ಮದುವೆ ನಂತರದ ಅವರ ಜೀವನ ಅನುಭವಿಸಿದವರಿಗಷ್ಟೇ ಗೊತ್ತು..?
     ಪ್ರಿಯರೇ.. ಓದುವಾಗ ಎಲ್ಲರೂ ಪ್ರೀತಿಸುತ್ತಾರೆಂದು ನೀವು ಪ್ರೀತಿಸಲು ಹೋದೀರಿ....
ಅವಸರದ ಪ್ರೀತಿ ಅವನತಿಗೆ ದಾರಿ......
( ಪ್ರಜಾವಾಣಿ ಯುವಜನ ವಿಭಾಗದಲ್ಲಿ ಪ್ರಕಟಗೊಂಡ ಲೇಖನ)
ಪತ್ರೇಶ್ ಹಿರೇಮಠ್ 

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ